Saturday 4 February 2012

ದಕ್ಷಿಣದ ಕಾಶ್ಮೀರದಲ್ಲಿ ಮರೆಯಾಗುತ್ತಿರುವ ಎರವರು

ನೆಲೆಯೂರಲು ಇವರಿಗೆ ಒಂದು ಸೂರಿಲ್ಲ. ಬೇಡಿ ತಿನ್ನುವಂತಹ ಪರಿಸ್ಥಿತಿ ಇದ್ದರೂ ನಾವು ಬಡವರು ಎಂಬ ಪರಿವೆಯೇ ಇಲ್ಲ. ಯಜಮಾನನ ಮನೆಯೇ ಇರಬೇಕಾದರೆ ಓದಿನರಮನೆಯ ಹಂಗು ನಮಗ್ಯಾಕೆ ಎಂದು ಇಂದಿಗೂ ನಾಲ್ಕಕ್ಷರ ಕಲಿಯದ ಸಮುದಾಯವಿದು.
ಸರ್ವರೋಗಕೂ ಸಾರಾಯಿ ಮದ್ದು ಎಂಬಂತೆ ಸದಾ ಮದ್ಯದ ದಾಸರಾಗಿ, ಅಪ್ಪ ಹಾಕಿದ ಆಲದಮರಕ್ಕೆ.... ಎಂಬಂತೆ ಅನಾರೋಗ್ಯಗೊಂಡರೆ ನಾಟಿ ಮದ್ದು, ಮಾಟ-ಮಂತ್ರಗಳ ಮೊರೆ ಹೋಗುತ್ತಾರೆ.
ದೇವರು, ಯಜಮಾನನಿದ್ದ ಮೇಲೆ ನಮ್ಮ ಭವಿಷ್ಯದ ಬಗ್ಗೆ ನಾವೇಕೆ ಚಿಂತಿಸಲಿ. ಕೈತುಂಬಾ ಹಣ ಗಳಿಸಿ ನಾವೇನು ಮಾಡಬೇಕು?
ಹೀಗೆ ವೈರುಧ್ಯದ ಪ್ರಶ್ನೆಗಳನ್ನು ಹಾಕುತ್ತಾ ಮೈ ದಣಿಸಿ ಹಗಲಿರುಳೂ ದುಡಿಯುತ್ತಿದ್ದಾರೆ. ಒಂದರ್ಥದಲ್ಲಿ ಇವರು ದಿನದ 24 ಗಂಟೆಯೂ ದುಡಿಯುವ ವರ್ಗದ ನಿಷ್ಠಾವಂತ ಶ್ರಮಿಕರು.
ಬಹುಶಃ ಇವರಿಲ್ಲದಿದ್ದರೆ ದಕ್ಷಿಣ ಭಾರತದ ಕಾಶ್ಮೀರವೆನಿಸಿರುವ ಕೊಡಗಿನ ಮೇಲ್ಜಾತಿಯ ಜನರು ಕಾಫಿ ತೋಟ ಮಾಡುತ್ತಿರಲಿಲ್ಲ. ಅದೇ ರೀತಿ ಈ ತೋಟಗಳನ್ನು ನಿಷ್ಠಾವಂತ ಶ್ರಮಿಕ ವರ್ಗದ ಕೈಗಿಟ್ಟು ದೇಶ ಕಾಯಲು ಸೈನ್ಯ ಸೇರುತ್ತಿರಲಿಲ್ಲವೇನೋ?
ಇವರು ಭೂಮಾಲೀಕರಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಸಮುದಾಯದ ಹೆಸರು ಎರವರು. ಆದರೆ, ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಈ ಸಮುದಾಯದ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಾ ಹೋಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸ್ವಯಂಕೃತ ಅಪರಾಧ.
ಹೌದು. ತಮ್ಮ ಕುಟುಂಬದ ಏಳ್ಗೆ, ಸುಶಿಕ್ಷಿತರಾಗಬೇಕೆಂಬ ಹಪಹಪಿತನ, ಆರೋಗ್ಯವಂತರಾಗಿರಬೇಕೆಂಬ ಬಯಕೆ ಇದ್ದಿದ್ದರೆ ಸಮುದಾಯ ವಿನಾಶದ ಅಂಚಿಗೆ ತಳ್ಳಲ್ಪಡುತ್ತಿರಲಿಲ್ಲ. ಈ ಯಾವುದೇ ಆಲೋಚನೆ ಮಾಡದೇ ಇದ್ದುದರಿಂದಲೇ ಈ ವರ್ಗ ಇಂದು ಕರಗುತ್ತಿದೆ.
ರಾಜ್ಯದ ಕೊಡಗಿನ ದಕ್ಷಿಣ ಭಾಗ ಮತ್ತು ಕೇರಳ-ಕರ್ನಾಟಕ ಗಡಿಭಾಗದ ವಯನಾಡು ಜಿಲ್ಲೆಗಳಲ್ಲಿ ಈ ಬುಡಕಟ್ಟು ಪಂಗಡದ ಕುಟುಂಬಗಳು ನೆಲೆಸಿವೆ. ಇವರು ಮೂಲತಃ ಕೇರಳದವರು ಎನ್ನುವ ಪ್ರತೀತಿ ಇದೆ. ಇವರ ಮೂಲವನ್ನು ಕೆದಕುತ್ತಾ ಹೋದರೆ ಹಲವಾರು ಕತೆಗಳು, ಐತಿಹ್ಯಗಳು ಕೇಳಿಬರುತ್ತವೆ. ಆದರೆ, ಅನಾದಿ ಕಾಲದಿಂದಲೂ ಹೇಳಿಕೊಂಡು ಬಂದಿರುವ ಕತೆಯ ಪ್ರಕಾರ ಎರವರು, ಕಾಲಚಾತ ಎಂಬ ಮೂಲ ಪುರುಷನ ಸಂತತಿಯಿಂದ ಬಂದವರು.
ಪ್ರತೀತಿಯಂತೆ ಹಿಂದೆ ಇವರಿಗೆ ಏಳು ತಲೆಮಾರಿನವರೆಗೆ ಗಂಡು ಸಂತತಿಯೇ ಇರಲಿಲ್ಲವಂತೆ. ಆಗ ಚಾತ ಮತ್ತು ಚಾತಿಯೆಂಬ ಎರಡು ಮಣ್ಣಿನ ಮೂರ್ತಿಗಳನ್ನು ಮಾಡಿ ಚಾತನ(ಪುರುಷ) ಕೈಲಿ ಒನಕೆ ಕೊಟ್ಟು, ಚಾತಿಯ(ಮಹಿಳೆ) ಕೈಲಿ ಮೊರ ಕೊಟ್ಟು ಎರಡೂ ಮೂರ್ತಿಗಳಿಗೆ ಜೀವ ಕೊಡಲಾಗಿತ್ತಂತೆ. ಆಗಿನಿಂದ ಗಂಡು ಸಂತತಿ ಹೆಚ್ಚಾಯ್ತು ಎಂದು ಹೇಳಲಾಗುತ್ತಿದೆ.
ಕೇರಳದ ವಯನಾಡಿನಿಂದ ರಾಜ್ಯಕ್ಕೆ ಬಂದವರನ್ನು ಪಣಿಯರೆಂದು, ಕೇರಳದಲ್ಲೇ ಉಳಿದುಕೊಂಡವರನ್ನು ಪಂಜಿರಿಯರೆಂದೂ ಕರೆಯಲಾಗುತ್ತಿದೆ.
ಕಪ್ಪನೆ ಮೈಬಣ್ಣದ ಸ್ವಲ್ಪ ಬಲಾಢ್ಯ ಶರೀರದ ಮೊಣಕಾಲಿವರೆಗೆ ಕಟ್ಟುವ ಪಂಚೆ ಉಟ್ಟವರು ಕಂಡರೆ ಅವರೇ ಎಳವರು ಎಂದು ಸುಲಭವಾಗಿ ಗುರುತಿಸಬಹುದು. ಕೆದರಿದ ಗುಂಗುರು ಕೂದಲು ಹೊಂದಿರುವ ಸಮುದಾಯದ ಭಾಷೆ- ಸಂಸ್ಕೃತಿಯಲ್ಲಿ ಹಲವು ವೈವಿಧ್ಯತೆಗಳನ್ನು ಕಾಣುತ್ತೇವೆ. ಕರ್ನಾಟಕದಲ್ಲಿದ್ದರೂ ಇತ್ತ ಕನ್ನಡವೂ ಅಲ್ಲದ, ಕೊಡಗಿನಲ್ಲಿದ್ದರೂ ಅತ್ತ ಕೊಡವವೂ ಅಲ್ಲದ, ಕೇರಳದಿಂದ ವಲಸೆ ಬಂದವರಾದರೂ ಮಲಯಾಳಂ ಭಾಷೆಯನ್ನೂ ಅಲ್ಲದ ರೀತಿಯ ಭಾಷೆಯಲ್ಲಿ ಇವರು ಮಾತನಾಡುತ್ತಾರೆ. ಒಂದು ರೀತಿಯಲ್ಲಿ ಮಲಯಾಳಂ-ಕೊಡವ-ಕನ್ನಡ-ತೆಲುಗು ಮಿಶ್ರಿತ ಭಾಷೆ ಇವರದ್ದು.
ಇದರ ದ್ಯೋತಕವಾಗಿ ತಲೆತಲಮಾರಿನಿಂದ ಗಂಡಸರು ಬಿದಿರಿನ ಬೊಂಬಿನಿಂದ ತಾವೇ ತಯಾರಿಸಿದ ಶಹನಾಯಿ ಮಾದರಿಯ ಚೀನಿ ಎಂಬ ಸಾಧನ ಮತ್ತು ಪ್ರಾಣಿಗಳ ಚರ್ಮದಿಂದ ತಯಾರಿಸಿದ ಢಮರು ಆಕಾರದ ದೊಡ್ಡ ಸಾಧನವನ್ನು ಬಾರಿಸುತ್ತಾರೆ. ಈ ಢಮರು ಆಕಾರದ ಸಾಧನಕ್ಕೆ 'ದುಡಿ' ಎಂದು ಕರೆಯಲಾಗುತ್ತದೆ. ಗಂಡಸರು ಈ ವಾದ್ಯಗಳನ್ನು ನುಡಿಸುತ್ತಿದ್ದರೆ, ಅದರ ತಾಳಕ್ಕೆ ತಕ್ಕಂತೆ ಮೊರ ಹಿಡಿದ ಮಹಿಳೆಯರು ಹೆಜ್ಜೆ ಹಾಕುತ್ತಿದ್ದರು.
ಪ್ರತಿದಿನ ಸಂಜೆ ಇಂತಹ ಕಾರ್ಯಕ್ರಮಗಳನ್ನು ತಮ್ಮ ಪ್ರದೇಶಗಳಲ್ಲಿ ನಡೆಸುತ್ತಿದ್ದ ಎರವರು ತಮ್ಮ ಸಾಂಸ್ಕೃತ ಸೊಬಗನ್ನು ಮೆರೆಯುತ್ತಿದ್ದರು.
ಇಂದು ಕೊಡಗಿನಲ್ಲಿ ಚೀನಿ ಮತ್ತು ದುಡಿಯ ನಾದಗಳು ಹೊರಹೊಮ್ಮುತ್ತಿಲ್ಲ. ಅದರ ಬದಲಿಗೆ ವಿನಾಶದ9 ಅಂಚಿನಲ್ಲಿರುವ ಎರವರ ಆರ್ತನಾದ ಕೇಳಿಯೂ ಕೇಳದ ಸ್ಥಿತಿಯಲ್ಲಿದೆ.
ಹೀಗಾಗಿ ಇವರ ಪರಿಸ್ಥಿತಿ ಹೇಗಿದೆಯೆಂದರೆ, 'ಅಂಬಿಲ ಮೊಟ್ಟೆ ತೂಂಗ್್ತುಪೆ ದುಡಿ ಮುರ್ಕುವ ನಲ್ಲ, ಕೊಚ್ಚುವ ಮಿರಾತಿನ ಕೂಟುಪಲ್ಲು ಚೀನಿಪಿನಿಪನಲ್ಲ...'
ಅರ್ಥ: ಎರವರ ಹುಡುಗನ ಚರ್ಮ ದುಡಿಗೆ ಆಗೋದಿಲ್ಲ, ಹಣ್ಣು ಹಣ್ಣು ಮುದುಕಿಯ ಚರ್ಮ ಚೀನಿ ನುಡಿಸೋದಿಲ್ಲ.
ಅಂದರೆ, ಎರವರು ದುಡಿ ಮತ್ತು ಚೀನಿ ನುಡಿಸುವುದನ್ನು ಮರೆತಿರುವುದನ್ನು ವ್ಯಂಗ್ಯ ಮಾಡಲೆಂದೇ ಹುಟ್ಟಿಕೊಂಡಿರುವ ಗಾದೆ ಇದು.
ಇಷ್ಟಕ್ಕೆಲ್ಲಾ ಕಾರಣಗಳೇನೆಂಬುದನ್ನು ಹುಡುಕುತ್ತಾ ಹೋದರೆ ತಪ್ಪಿತಸ್ಥರ ಸ್ಥಾನದಲ್ಲಿ ಈ ಎರವರೇ ನಿಲ್ಲುತ್ತಾರೆ. ಏಕೆಂದರೆ, ಇವರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆ ತೆರೆದು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಕೇಳಿದರೆ, 'ನಮ್ಮ ಮಕ್ಕಳು ಕಲಿತರೆ ನಿಮಗೇನು ಲಾಭ?' ಎಂಬ ಪ್ರಶ್ನೆ ಸಮುದಾಯದ ಮುಖಂಡರಿಂದ ಬರುತ್ತದೆ.
ನಿಮ್ಮ ಜೀವನ ಸುಮಧುರವಾಗಲೆಂದು ಅಲ್ಪಸ್ವಲ್ಪ ಹಣ ಕೂಡಿಡಿ ಎಂದರೆ, ಅದರ ಉಸಾಬರಿ ನಮಗ್ಯಾಕೆ ಎನ್ನುತ್ತಾ,
'ಎನಾಕೆಂತೈ ಚಾಲ. ಪಾಪೆಂಗು ಪಾಪೆಂಗು ಚಾಲ'....
ಅಂದರೆ, ದುಡ್ಡಿನ ಗೊಡವೆ ನಮಗ್ಯಾಕೆ. ನಮಗೆ ಸಾಲ ಬೇಡ. ಏನಿದ್ದರೂ ಒಬ್ಬ ಯಜಮಾನ ಮತ್ತು ಮತ್ತೊಬ್ಬ ಯಜಮಾನನ ಮಧ್ಯೆ ಸಾಲವಷ್ಟೆ ಎನ್ನುತ್ತಾರೆ.
ಇದರರ್ಥ, ಕೊಡಗಿನಲ್ಲಿ ಚೀಟಿಯ ಮೂಲಕ ಮನೆಯ ಆಳನ್ನು ಆಯ್ದುಕೊಳ್ಳುವ ಊಳಿಗಮಾನ್ಯ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಅಂದರೆ, ಎರವ ಸಮುದಾಯದ ಕೂಲಿಯಾಳು ಒಬ್ಬ ಭೂಮಾಲೀಕನ ಮನೆಯಲ್ಲಿ ಇಂತಿಷ್ಟು ಹಣ ತೆಗೆದುಕೊಂಡು ಕೂಲಿ ಕೆಲಸ ಮಾಡುತ್ತಿರುತ್ತಾನೆ. ಇದೇ ಆಳು ನನಗೆ ಬೇಕೆಂದು ಮತ್ತೊಬ್ಬ ಬಯಸುತ್ತಾನೆ. ಆಗ ಮೊದಲ ಯಜಮಾನ ಆಳಿನ ಕೈಲೊಂದು ಚೀಟಿ ಕೊಟ್ಟು ಆಳಿನಿಂದ ನನಗೆ ಇಷ್ಟು ಹಣ ಬರಬೇಕಿದೆ. ಅದನ್ನು ನೀಡಿ ಆಳನ್ನು ನಿಮ್ಮವನನ್ನಾಗಿ ಮಾಡಿಕೊಳ್ಳಿ ಎಂದು ಬರೆದು ಹೊಸ ಯಜಮಾನನ ಬಳಿಗೆ ಕಳುಹಿಸುತ್ತಾರೆ.
ನಮ್ಮ ಹಣಕಾಸಿನ ವಿಚಾರವನ್ನು ಯಜಮಾನರೇ ನೋಡಿಕೊಳ್ಳುವಾಗ ದುಡ್ಡಿನ ಚಿಂತೆ ನಮಗ್ಯಾತಕೆ ಎನ್ನುತ್ತಾರೆ ಎರವರು.
ದಿನವಿಡೀ ಯಜಮಾನನ ತೋಟದಲ್ಲಿ ದೇಹವನ್ನು ದಂಡಿಸಿ ದುಡಿದು ಬರುತ್ತಿದ್ದ ಎರವರು ಮನೆಗೆ ಬರುತ್ತಿದ್ದಂತೆಯೇ 'ಅಂಡಲ್ ಕಞ ಕಞ. ಚಂಬಿಲ್ ನೀರು ನೀರು, ಚಕ್ಕರೆಕಾಯಿ ಮುರಿತಮ ಹ್ಯಾಟೆಮೀನು ಬರ್ತಮ, ಮುಚ್ಚಿಬೆಚ್ಚ ನೂಕಾಣುಕು ಎನ್ನ ಚಂದಮ...'
ಅರ್ಥ: ಒಲೆಯಲ್ಲಿ ಗಂಜಿ ಅನ್ನ ಅನ್ನ, ಚೆಂಬಲ್ಲಿ ನೀರು ನೀರು, ಕುಂಬಳಕಾಯಿ ಸಾರು, ಹುರಿದ ಹ್ಯಾಟೆಮೀನು ಪಕ್ಕದಲ್ಲಿದ್ದರೆ ಬಿಸಿ ಬಿಸಿ ಭೋಜನ ಎಂತಾ ಸೊಗಸು ಎನ್ನುತ್ತಿದ್ದ ಕಾಲವಿತ್ತು. ಆದರೆ, ಈಗ ಆ ಕಾಲ ಹೋಗಿ
ಬ್ರಾಂಡಿ ಶಾಪ್್ನಲ್ಲಿ ಮದ್ಯ ಏರಿಸಿ ತೂರಾಡುತ್ತಾ ಬರುವುದೇ ಸೊಗಸು ಎನ್ನುವಂತಾಗಿದೆ.
ಹೌದು. ಈ ಎರವರು ಯಾವ ರೀತಿ ಮದ್ಯದ ದಾಸರಾಗಿದ್ದಾರೆಂದರೆ, ಹೆಣ್ಣು- ಗಂಡು ಎಂಬ ಭೇದ ಭಾವ ಇಲ್ಲದೇ ಮದ್ಯ ಸೇವಿಸುತ್ತಾರೆ. ಈ ಮದ್ಯಪಾನದ ಅತಿರೇಕ ಪ್ರಾಣಕ್ಕೇ ಎರವಾಗಿರುವ ಪ್ರಸಂಗಗಳೂ ಜರುಗಿವೆ. ಮದ್ಯದ ನಶೆಯಲ್ಲಿ ಗಂಡ ಹೆಂಡತಿಯರು ನಾನು ಸತ್ತು ಹೋಗುತ್ತೇನೆ. ನೋಡೋಣ ನೀನೂ ಸತ್ತು ಹೋಗು ಎಂದು ಸವಾಲು ಪಾಟೀ ಸವಾಲು ಹಾಕುತ್ತಾರೆ. ಆಗ ಗಂಡ ನೇಣು ಹಾಕಿಕೊಳ್ಳುತ್ತಾನೆ. ನಶೆಯಲ್ಲಿದ್ದ ಹೆಂಡತಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಇವರು ಪ್ರಕೃತಿ ಆರಾಧಕರು. ಆದರೆ, ಭೂಮಿಯಿಲ್ಲ. ಭೂಮಾಲೀಕನ ಭೂಮಿಯೇ ಇವರಿಗೆ ದೇವರು. ಈ ಭೂಮಿಯ ಉಳುಮೆಯಲ್ಲೇ ತೃಪ್ತಿ ಕಂಡುಕೊಂಡ ಸಮುದಾಯವಿದು. ನಿಷ್ಠೆಗೆ ಮತ್ತೊಂದು ಹೆಸರೇ ಎರವರು. ಹೀಗಾಗಿ ವರ್ಷವಿಡೀ ದುಡಿದ ಇವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಭೂಮಾಲೀಕರು ಪ್ರತಿವರ್ಷದ ಸೆಪ್ಟಂಬರ್್ನಲ್ಲಿ ಕೈಲ್್ಪೊಲ್ದ್ ಎಂಬ ಹಬ್ಬ ಆಚರಿಸುತ್ತಾರೆ. ಹಂದಿಯನ್ನು ಕೊಯ್ದು ಅದರ ತಲೆ, ಕಾಲು ಮತ್ತು ಇಂತಿಷ್ಟು ಮಾಂಸವನ್ನು ಎರವರಿಗೆ ನೀಡುತ್ತಾರೆ. ಜತೆಗೆ ಮದ್ಯವೂ ಇರುತ್ತದೆ.
ವರ್ಷವಿಡೀ ತನ್ನ ಮಾಲೀಕನಿಗೆ ನಿಷ್ಠರಾಗಿದ್ದ ಎರವ ಅಂದು ಮಾತ್ರ ತಿರುಗಿ ಬೀಳುತ್ತಾನೆ. ಅಂದು ಕಂಠಪೂರ್ತಿ ಕುಡಿದು ಮಾಲೀಕನಿಗೆ ವಾಚಾಮಗೋಚರವಾಗಿ ನಿಂದಿಸುತ್ತಾನೆ. ಆದರೆ, ಮಾಲೀಕ ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಏಕೆಂದರೆ, ಆತ ತನ್ನ ನಿಷ್ಠಾವಂತ ಕಾರ್ಮಿಕ. ಅವನಿಂದಲೇ ತನ್ನ ಜೀವನ ಸಾಗುತ್ತಿರುವುದನ್ನು ಅರಿತಿರುತ್ತಾನೆ. ನಗುಮೊಗದಿಂದಲೇ ಎರವನ ಬೈಗುಳವನ್ನು ಸಹಿಸಿಕೊಳ್ಳುತ್ತಾನೆ. ಮರುದಿನ ಯಥಾಸ್ಥಿತಿಯಲ್ಲಿ ಬರುವ ಎರವ ಮಾಲೀಕ ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾನೆ.
ಹೀಗಾಗಿ ದಕ್ಷಿಣ ಕೊಡಗಿನಲ್ಲಿ ನಡೆಯುವ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 90 ರಷ್ಟು ಎರವ ಸಮುದಾಯಕ್ಕೆ ಸೇರಿದವಾಗಿರುತ್ತವೆ. ಚೀನಿ ಮತ್ತು ದುಡಿಯನ್ನು ನುಡಿಸುವಂತಹ ಶ್ರೀಮಂತ ಕಲೆಗೆ ತಿಲಾಂಜಲಿ ಹೇಳಿರುವ ಈ ಸಮುದಾಯ ಗುಂಡಿನ ಮತ್ತಿನಲ್ಲೇ ಸದಾ ಇರುವಂತಾಗಿದೆ. ಪಟ್ಟಣಗಳಿಗೆ ಹೋದರೆ ಅಲ್ಲಿ ಕಂಠಪೂರ್ತಿ ಕುಡಿದು ರಸ್ತೆಗಳಲ್ಲೇ ಬೀಳುವಂತಹ ಪರಿಸ್ಥಿತಿಗೆ ತಮ್ಮನ್ನು ತಾವು ತಂದುಕೊಂಡಿದ್ದಾರೆ.
ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿರದ ಕಾರಣ ಸಮುದಾಯದ ಬಹುತೇಕ ಸಾವುಗಳು ಸಂಭವಿಸುವುದು ಅನಾರೋಗ್ಯದಿಂದಾಗಿಯೇ. ಕುಡಿತದ ದಾಸರಾಗಿರುವುದರಿಂದ ಇವರು 40 ರಿಂದ 45 ವರ್ಷಕ್ಕೇ ಮುದುಕರಂತೆ ಕಾಣುತ್ತಾರೆ. ಹೀಗಾಗಿ ಇವರ ಜೀವಿತಾವಧಿ ಮಧ್ಯವಯಸಿನಲ್ಲೇ ಮುಗಿದುಹೋಗುತ್ತಿರುವುದು ವಿಪರ್ಯಾಸ.
ಇದರ ಪರಿಣಾಮ ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಸೇರಿದಂತೆ ಹಲವು ಭಾಗಗಳಲ್ಲಿ ಎರವರ ಸಂಖ್ಯೆ ಕ್ಷೀಣಿಸುತ್ತಾ ಬಂದಿದೆ. 2001 ರಲ್ಲಿ ಸುಮಾರು 20 ಸಾವಿರದಷ್ಟಿದ್ದ ಜನಸಂಖ್ಯೆ ಪ್ರಸ್ತುತ 15 ಸಾವಿರದ ಗಡಿ ದಾಟುವುದಿಲ್ಲ. ಇದಕ್ಕೆ ಮತ್ತಷ್ಟು ಪ್ರಮುಖ ಕಾರಣಗಳೆಂದರೆ, ಹಣದ ಆಸೆಗಾಗಿ ಗರ್ಭನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವುದು ಮತ್ತು ಕೆಲವರು ಇತರೆ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದು.
ಹೀಗಾಗಿ ಎರವರ ಕುಟುಂಬಗಳು ಬೆಳೆಯುತ್ತಿಲ್ಲ. ಈ ಮೂಲಕ ರಾಜ್ಯದ ಒಂದು ಹಳೆಯ ಬುಡಕಟ್ಟು ಸಮುದಾಯ ತನ್ನ ವಿನಾಶಕ್ಕೆ ತಾನೇ ಕಾರಣವಾಗುತ್ತಿದೆ.
ವಿನಾಶದ ಅಂಚಿನಲ್ಲಿರುವ ಎರವರಲ್ಲಿ ಕುಡಿತದ ಚಟ ಬಿಡಿಸಿ, ಅವರ ಮಕ್ಕಳಿಗೆ ಕಡ್ಡಾಯವಾದ ಶಿಕ್ಷಣ ನೀಡುವಂತಹ ಕಠಿಣ ಕಾನೂನು ಪ್ರತ್ಯೇಕವಾಗಿ ಬರಬೇಕಾಗಿದೆ. ಅಲ್ಲದೇ, ಅವರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವಂತಹ ಕೆಲಸ ಸರ್ಕಾರಗಳಿಂದ ಆಗಬೇಕಿದೆ - ಅಡ್ಡಂಡ ಕಾರ್ಯಪ್ಪ, ಎರವ ಸಮುದಾಯವನ್ನು ಅಧ್ಯಯನ ಮಾಡಿದವರು.

copyright@ravimalenahalli

ಬೆಸ್ತರ ಗಾಳಕ್ಕೆ ಇನ್ನೂ ಸಿಕ್ಕಿಲ್ಲ ನೆಮ್ಮದಿ

ಚುಕ್ಕಾಣ ಚುಕ್ಕಿ ಹೊಯ್ಯ ಚುಕ್ಕಾಣ ಚುಕ್ಕಿ ಹೊಯ್ಯ........
ಅಲ್ಲೇ ಇದೆಯೋ ಬಾನಲ್ಲೇ ಇದೆಯೋ ಹೊಯ್ಯ......
ಸಂಜೆಗತ್ತಲಲ್ಲಿ ನೀಲಿ ಆಕಾಶದ ನಕ್ಷತ್ರಗಳನ್ನು ಎಣಿಸುತ್ತಾ ಸಮುದ್ರದಲೆಗಳ ಮಧ್ಯೆ ಬಿರುಸಾಗಿ ಬಲೆ ಬೀಸುತ್ತಾ ಮೀನು ಹಿಡಿಯುವಾಗಿನ ಈ ಪಾಡ್ದನ ಈಗ ನೆನಪು ಮಾತ್ರ.
ಕಿವಿಗಿಂಪಾಗುವ ಈ ಪಾಡ್ದನ ಹಾಡುತ್ತಾ ಮೀನು ಹಿಡಿಯುವ ಕಾಯಕದಲ್ಲಿ ತೊಡಗಿದ್ದ ಕರಾವಳಿಯ ಮೊಗವೀರರ ಮೊಗದಲ್ಲಿ ಮಂದಹಾಸವಿಲ್ಲ.
ಇತ್ತ ಬಯಲು ಸೀಮೆ ಎನಿಸಿರುವ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ತಾವು ಗಂಗೆಯ ವಂಶಸ್ಥರು ಎನಿಸಿಕೊಳ್ಳುತ್ತಿರುವ ಗಂಗಾಮತಸ್ಥರಿಗೆ ಗಂಗೆಯೇ ಕೃಪೆ ತೋರುತ್ತಿಲ್ಲ.
ಮೀನು ಹಿಡಿಯುವುದನ್ನು ಬಿಟ್ಟರೆ ಬೇರಾವುದೇ ಕೆಲಸ ಗೊತ್ತಿಲ್ಲದಂತಿರುವ ಬೆಸ್ತನ ಬದುಕಿನಲ್ಲಿನ ಬೆಸುಗೆ ಬಿಟ್ಟಿದೆ.
ಇದು ರಾಜ್ಯದಲ್ಲಿ ಇರುವ ಮೀನುಗಾರರು ಅಂದರೆ, ಬೆಸ್ತ ಸಮುದಾಯದ ಈಗಿನ ದುಸ್ಥಿತಿ.
ಮೀನು ತಿಂದವರು ಅದರಲ್ಲೂ ಸಮುದ್ರದ ಮೀನು ತಿಂದವರ ಬುದ್ಧಿಮತ್ಥೆ ಹೆಚ್ಚಾಗುತ್ತದೆ. ಚುರುಕಿನಿಂದ ಚಾಲಾಕಿಗಳಾಗಿರುತ್ತಾರೆ ಎಂಬ ಪ್ರತೀತಿ ಇದೆ. ಆದರೆ, ಇದೇ ಮೀನು ತಿನ್ನಿಸುವವರ ಬದುಕು 'ಮಂದ'ವಾಗಿದೆ.
ಕೃಷಿ ಕ್ಷೇತ್ರದಲ್ಲೇ ಮೀನುಗಾರಿಕೆಯನ್ನೂ ಸೇರಿಸಲಾಗಿದೆ. ಆದರೆ, ಕೃಷಿಕರಿಗೆ ಸಿಕ್ಕಷ್ಟು ಸವಲತ್ತುಗಳು ಮೀನುಗಾರರಿಗೆ ಸಿಗುತ್ತಿಲ್ಲ.
ಇವರಿಗೆ ಬುಟ್ಟಿ ತುಂಬ ಮೀನು ಹಿಡಿದರಷ್ಟೇ ಹೊಟ್ಟೆ ತುಂಬುತ್ತದೆ. ಇಲ್ಲವಾದರೆ, ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ.
ಮೀನು ಕೃಷಿಯನ್ನು ಅವಲಂಬಿಸಿರುವ 39 ಕ್ಕೂ ಹೆಚ್ಚು ಉಪ ಸಮುದಾಯಗಳು ನಮ್ಮಲ್ಲಿವೆ. ಪ್ರಾದೇಶಿಕತೆಗೆ ತಕ್ಕಂತೆ ಈ ಸಮುದಾಯವನ್ನು ನಾನಾ ಹೆಸರಿನಲ್ಲಿ ಕರೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡದಲ್ಲಿ ಇವರನ್ನು ಮೊಗವೀರ, ಮೊಗೇರಾ(ಆಡು ಭಾಷೆಯಲ್ಲಿ ಮೊಗವೀರರನ್ನು ಹೀಗೆ ಕರೆಯಲಾಗುತ್ತದೆ), ಗಂಗಾಮತಸ್ಥ, ಬೆಸ್ತ, ಮಜಿದಾ, ಅಂಬಿಗಾ, ಅಂಬಿಗೇರ್, ಕಬ್ಬಲಿಗ, ಸುನಗಾರ, ಚಾಲುವಾರ, ಕಬ್ಬೇರು, ಕೋಳಿ, ನಾಟಿಕಾರ್, ಟೋಕರೆ ಕೋಳಿ, ಕೋಯ, ಬಿನ್ನಕೋಯ ಹೀಗೆ ಹಲವು ಹೆಸರು ಇವೆ.
ರಾಜ್ಯದಲ್ಲಿ ನಡೆಯುತ್ತಿರುವ ಮೀನು ಕೃಷಿಯಲ್ಲಿ ಶೇ. 70 ಕ್ಕಿಂತಲೂ ಹೆಚ್ಚು ಸಮುದ್ರದಲ್ಲಿ ಆಗುತ್ತದೆ. ಹೀಗಾಗಿ ಮೀನುಗಾರಿಕೆ ಸಮೃದ್ಧವಾಗಿದ್ದರೂ ಈ ಸಮುದಾಯ ಇದು ಹೊಂದಿಕೆಯಾಗುತ್ತಿಲ್ಲ. ಏಕೆಂದರೆ, ಈ ಮೀನುಗಾರರ ಜಾಗದಲ್ಲಿ ಈಗ ಯಾಂತ್ರೀಕೃತ ದೋಣಿಗಳು, ಹಡಗುಗಳು ಬಂದಿವೆ. ಈ ಮೂಲಕ ಮೀನುಗಾರರ ಬಹುತೇಕ ಕೆಲಸವನ್ನು ಕಸಿದುಕೊಂಡಿವೆ. ಅಲ್ಲದೇ, ಸ್ಥಿತಿವಂತ ಮೊಗವೀರರು ಇಂತಹ ಅತ್ಯಾಧುನಿಕ ದೋಣಿ ಮತ್ತು ಹಡಗು ಹೊಂದಿದ್ದು, ಅವರ ಬಳಿ ಉಳಿದ ಮೀನುಗಾರರು ದಿನಕ್ಕಿಷ್ಟು ಸಂಬಳಕ್ಕೆ ಮೀನು ಹಿಡಿಯುವ ಕಾಯಕಕ್ಕೆ ಹೋಗಬೇಕು.
ಈ ಕಾರಣದಿಂದ ಮೊಗವೀರರಲ್ಲಿ ಬಹುತೇಕ ಮಂದಿ ತಮ್ಮ ವೃತ್ತಿಯನ್ನು ಬಿಟ್ಟು ನಗರಗಳಿಗೆ ಉದ್ಯೋಗ ಹರಸಿ ವಲಸೆ ಹೋಗುತ್ತಿದ್ದಾರೆ. ಅಲ್ಪಸ್ವಲ್ಪ ಜಮೀನು ಇದ್ದವರು ಕೃಷಿಗೆ ಪರಿವರ್ತಿತರಾಗಿದ್ದರೆ, ಮತ್ತೆ ಹಲವು ಮಂದಿಯ ಜೀವನಕ್ಕೆ ಕೂಲಿ ಕೆಲಸಗಳು ಆಸರೆಯಾಗಿವೆ.
ಹೀಗೆ ವಲಸೆ ಹೋದವರಲ್ಲಿ ಬಹುತೇಕ ಜನರು ಶೈಕ್ಷಣಿಕವಾಗಿ ಮುಂದೆ ಬಂದಿದ್ದು ಸ್ವಯಂಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ. ದೂರದ ಮುಂಬೈಗೆ ಸಾಕಷ್ಟು ಜನ ವಲಸೆ ಹೋಗಿದ್ದು, ಅಲ್ಲಿ ಹೊಟೇಲ್ ಉದ್ಯಮದಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ ಕರಾವಳಿ ಪ್ರದೇಶದ ಮೀನುಗಾರ ಸಮುದಾಯದವರಲ್ಲಿ ಶೇ. 35 ರಿಂದ 40 ಮಂದಿ ಮೀನುಗಾರಿಕೆಯನ್ನೇ ಮುಂದುವರೆಸಿಕೊಂಡು ಆರ್ಥಿಕ, ಶೈಕ್ಷಣಿಕವಾಗಿ ಮೇಲೇರದೇ ಇದ್ದ ಸ್ಥಿತಿಯಲ್ಲೇ ಇದ್ದರೆ, ಉಳಿದವರು ನಗರ ಪ್ರದೇಶಗಳಲ್ಲಿ ಉತ್ತಮ ಸ್ಥಿತಿಯ ಜೀವನ ಸಾಗಿಸುತ್ತಿದ್ದಾರೆ.
ಈ ಕರಾವಳಿ ಪ್ರದೇಶದ ಮೀನುಗಾರರ ಪರಿಸ್ಥಿತಿಗೂ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಮೀನುಗಾರರಿಗೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು.
ಬೆಸ್ತರೆಂದೂ ಕರೆಯಿಸಿಕೊಳ್ಳುವ ಈ ಸಮುದಾಯ ಉತ್ತರ ಕರ್ನಾಟಕ, ಮುಂಬೈ ಮತ್ತು ಹೈದ್ರಾಬಾದ್ ಕರ್ನಾಟಕದಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ. ಈ ಭಾಗದವರಿಗೆ ಬೆಸ್ತರು, ಗಂಗಾಮತಸ್ಥರು, ಕೋಯಿ, ಕೋಳಿ, ಚಾಲುವಾರ, ಕಬ್ಬೇರು, ಕೋಳಿ, ನಾಟಿಕಾರ್, ಟೋಕರೆ ಕೋಳಿ, ಕೋಯ, ಬಿನ್ನಕೋಯ ಸೇರಿದಂತೆ ಹಲವು ಹೆಸರಿನಿಂದ ಕರೆಯಲಾಗುತ್ತದೆ.
ಇವರೆಲ್ಲಾ ಆರ್ಥಿಕವಾಗಿ ತೀರಾ ಹಿಂದುಳಿದವರು. ಬಹುತೇಕ ಮಂದಿ ತುಂಗಭದ್ರಾ, ಕೃಷ್ಣಾ, ಭೀಮ, ಕಾವೇರಿ ಸೇರಿದಂತೆ ಹಲವು ನದಿ ತೀರದಲ್ಲಿದ್ದು, ಇಲ್ಲಿಯೇ ಮೀನುಗಾರಿಕೆ ಮಾಡುತ್ತಿದ್ದಾರೆ. ಆದರೆ, ಇವರಲ್ಲಿ ಶೇ. 95 ಕ್ಕಿಂತಲೂ ಹೆಚ್ಚು ಆರ್ಥಿಕವಾಗಿ ಹಿಂದುಳಿದವರು, ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಗಿಟ್ಟಿಸುವಷ್ಟು ಶೈಕ್ಷಣಿಕವಾಗಿ ಮುಂದುವರೆದಿಲ್ಲ.
ಈ ಸಮುದಾಯದ ಮೀನು ಕೃಷಿಯ ವೃತ್ತಿಯನ್ನು ಇತರೆ ಧರ್ಮೀಯರು ಮತ್ತು ಮೇಲ್ವರ್ಗದ ಜನರು ಕಿತ್ತುಕೊಂಡಿದ್ದಾರೆ. ಮೀನುಗಾರಿಕೆಗೆ ಅಗತ್ಯವಾದ ಆಧುನಿಕ ದೋಣಿಗಳನ್ನು ಖರೀದಿಸಲು ಇವರು ಅಶಕ್ತರು. ಕೇವಲ ಉಟ್ಟು ಹಾಕಿ ದಿನವಿಡೀ ಮೀನು ಹಿಡಿದು ಮಾರಾಟ ಮಾಡಿದರೂ ಕುಟುಂಬದ ಸದಸ್ಯರ ಹೊಟ್ಟೆ ತುಂಬಿಸುವುದೂ ಕಷ್ಟವಾಗಿದೆ. ಅಲ್ಲದೇ, ಆಡಳಿತಗಳ ಕಟ್ಟುನಿಟ್ಟಾದ ಕಾನೂನುಗಳಿಂದ ಮೀನು ಹಿಡಿಯಲಾರದಷ್ಟು ಸ್ಥಿತಿಗೆ ಬಂದಿದ್ದಾರೆ ಇವರು. ಏಕೆಂದರೆ, ನದಿ ಮತ್ತು ಹಳ್ಳಿಗಳಲ್ಲಿರುವ ದೊಡ್ಡ ದೊಡ್ಡ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತದೆ. ಹಣವಂತರು ಗುತ್ತಿಗೆ ತೆಗೆದುಕೊಂಡು ಈ ಮೀನುಗಳನ್ನು ಶೇಖರಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ, ಇದೇ ವೃತ್ತಿಯನ್ನು ಹೊಂದಿರುವ ಬೆಸ್ತರಿಗೆ ಅಥವಾ ಗಂಗಾಮತಸ್ಥರಿಗೆ ಈ ಗುತ್ತಿಗೆ ಸಿಗುವುದಿಲ್ಲ. ಏಕೆಂದರೆ, ಇವರು ಹಣವಂತರಿಗೆ ಸ್ಪರ್ಧೆ ನೀಡುವಷ್ಟು ಸ್ಥಿತಿಯಲ್ಲಿಲ್ಲ.
ಗಂಗಾಮತಸ್ಥರು ಎಂದಾಕ್ಷಣ ಪಾವಿತ್ರ್ಯವಂತರು ಎಂದು ಈ ಸಮುದಾಯವನ್ನು ನಮ್ಮ ಸಮಾಜ ಪರಿಗಣಿಸುತ್ತಿಲ್ಲ. ಈಗಿನ ಪ್ರಜ್ಞಾವಂತ ಸಮಾಜ ಇವರನ್ನು ಅಸ್ಪೃಶ್ಯರೆಂದೇ ಭಾವಿಸಿದೆ. ಹೀಗಾಗಿ ಈ ಸಮುದಾಯವನ್ನು ಊರಿನಿಂದ ಹೊರಗಿಡುವ ಕೆಟ್ಟ ಸಂದ್ರದಾಯ ಇನ್ನೂ ಚಾಲ್ತಿಯಲ್ಲಿರುವುದು ತಲೆ ತಗ್ಗಿಸುವ ಸಂಗತಿ. ಮೇಲ್ಜಾತಿಯವರ ಬಳಿ ಇವರು ಸರಿ ಸಮಾನರಾಗಿ ನಿಲ್ಲುವಂತಿಲ್ಲ. ಮೇಲ್ಜಾತಿಯವರು ಕುಳಿತುಕೊಳ್ಳುವ ಗ್ರಾಮದ ಅರಳಿ ಕಟ್ಟೆಯಲ್ಲಿ ಇವರು ಕುಳಿತುಕೊಳ್ಳುವಂತಿಲ್ಲ. ಇದೇ ಮೇಲ್ಜಾತಿಯವರ ಮನೆಯಲ್ಲಿ ಕೂಲಿ ಮಾಡಿದರೂ ಅವರ ಮನೆಗಳ ಒಳಗೆ ಹೋಗುವಂತಿಲ್ಲ. ಮನೆಯ ಹಿಂಬಾಗಿಲು ಅಥವಾ ಮುಂಬಾಗಿಲ ಹೊಸ್ತಿಲಲ್ಲಿ ಇವರಿಗೆ ಪ್ರತ್ಯೇಕವಾದ ತಟ್ಟೆಯಲ್ಲಿ ಊಟಕ್ಕಿಟ್ಟು ಕಳುಹಿಸುತ್ತಾರೆ ಮೇಲ್ಜಾತಿಯವರು.
ಊರ ದೇವಾಲಯಗಳಿಗೆ ಪ್ರವೇಶ ನಿಷಿದ್ಧ. ಊರಿನಿಂದ ಸ್ವಲ್ಪ ದೂರದಲ್ಲಿ ದಲಿತರ ಕೇರಿಗಳಿದ್ದರೆ, ಗಂಗಾಮತಸ್ಥರ ಕೇರಿ ಸ್ವಲ್ಪ ಹತ್ತಿರದಲ್ಲಿರುತ್ತದೆ. ಇಂತಹ ಹೀನಾಯ ಜೀವನ ಇವರದ್ದು.
ಸಮಾಜ ಗಂಗಾಮತಸ್ಥ ಅಥವಾ ಬೆಸ್ತರನ್ನು ಈ ರೀತಿ ನೋಡಿದರೆ, ಈ ಆಧುನಿಕ ಯುಗದಲ್ಲೂ ಸಮುದಾಯ ತನ್ನ ಹಳೆಯ ಕಂದಾಚಾರಗಳನ್ನು ಬಿಟ್ಟಿಲ್ಲ. ಅನಿಷ್ಟ ಪದ್ಧತಿಗಳಲ್ಲಿ ಒಂದಾದ ದೇವದಾಸಿ ಪದ್ಧತಿಯನ್ನು ಇನ್ನೂ ರೂಢಿಸಿಕೊಂಡು ಬಂದಿದೆ ಈ ಸಮುದಾಯ. ಇಂತಹ ಪದ್ಧತಿ ಆಚರಿಸುವುದು ಬೇಡ ಎಂದು ತಿಳಿ ಹೇಳಿದರೂ ಸಮುದಾಯದ ಕುಟುಂಬಗಳು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಅರೆಬೆತ್ತಲೆ ಮಾಡಿ ಬೇವಿನ ಸೊಪ್ಪಿನಿಂದ ಮೈಮುಚ್ಚಿ ದೇವರಿಗೆ ಹರಕೆ ತೀರಿಸುವುದನ್ನು ಬಿಟ್ಟಿಲ್ಲ. ಬಿಡುವ ಲಕ್ಷಣಗಳೂ ಇಲ್ಲ.
ಇಂತಹ ವಿಲಕ್ಷಣ ಸಂಪ್ರದಾಯವನ್ನು ಸವದತ್ತಿ, ಗುಲ್ಬರ್ಗಾ, ಬೀದರ್, ಬಿಜಾಪುರ ಮತ್ತಿತರೆ ಪ್ರದೇಶಗಳಲ್ಲಿ ಆಚರಿಸಲಾಗುತ್ತಿದೆ.
ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಇದ್ದರೂ ರಾಜಕೀಯವಾಗಿ ತನ್ನ ಪ್ರಾಬಲ್ಯ ಮೆರೆಯಲು ಸಾಧ್ಯವಾಗಿಲ್ಲ. ಮನೋರಮಾ ಮಧ್ವರಾಜ್, ಬಾಬುರಾವ್ ಚಿಂಚನ್ಸೂರ್್ರಂತಹ ಬೆರಳೆಣಿಕೆಯಷ್ಟು ಜನರು ರಾಜಕೀಯದಲ್ಲಿ ತೊಡಗಿದ್ದಾರಾದರೂ ಸಮುದಾಯಕ್ಕೆ ಹೇಳಿಕೊಳ್ಳುವಂತಹ ರಾಜಕೀಯ ಬೆಂಬಲ ಇಲ್ಲ.
ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯವನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಆದರೆ, ಈ ವರ್ಗದಲ್ಲಿ ಹೆಚ್ಚು ಜಾತಿಗಳು ಇರುವುದರಿಂದ ಅವುಗಳೊಂದಿಗೆ ಮೀಸಲಾತಿಗೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡ ಸರ್ಕಾರ 1996 ರಲ್ಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿರ್ಧಾರಕ್ಕೆ ಬಂದಿತ್ತು. ಆದರೆ, ಸಮುದಾಯಗಳಲ್ಲಿರುವ ಉಪಜಾತಿಗಳ ಬಗ್ಗೆ ಕೇಂದ್ರ ಸರ್ಕಾರ ಸೃಷ್ಟಿಸಿರುವ ಗೊಂದಲಗಳಿಂದಾಗಿ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಮೊಗವೀರರಲ್ಲಿ ಸಾಕಷ್ಟು ಕುಟುಂಬಗಳು ಇನ್ನೂ ಸಾಮಾಜಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ. ಸರ್ಕಾರಗಳು ಇಂತಹ ವರ್ಗಗಳ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಹ ಯೋಜನೆಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ - ಲಕ್ಷ್ಮಣ್ ಬಿ. ಕಾಂಚನ್, ಮೊಗವೀರ ಸಂಘದ ಮಾಜಿ ಅಧ್ಯಕ್ಷ.
ಹರಿಜನರಂತೆಯೇ ಕಡುಕಷ್ಟದ ಜೀವನ ಸಾಗಿಸುತ್ತಾ ಸಮಾಜದಲ್ಲಿ ತೀರಾ ಹಿಂದುಳಿದಿರುವ ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಸ್ವಲ್ಪ ಮಟ್ಟಿನ ಮೀಸಲಾತಿ ದೊರಕಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ - ಎಚ್. ದೇವೇಂದ್ರಪ್ಪ, ಗಂಗಾಮತಸ್ಥ ಸಮುದಾಯದ ಮುಖಂಡ.

ಹಕ್ಕಿಪಿಕ್ಕಿ: ಪಕ್ಷಿರಾಜರಿಗೀಗ ಬೇಟೆಯಿಲ್ಲ

ಇವರು ಪಕ್ಷಿ ಸಂಕುಲಕ್ಕೇ ರಾಜರು. ಆದರೆ, ಪಕ್ಷಿಗಳು ಮಾತ್ರ ಸಿಗುತ್ತಿಲ್ಲ. ಕಾಡಿನರಸರೆಂಬ ಪ್ರತೀತಿಯೂ ಇದೆಯಾದರೂ ಕಾಡು ಪ್ರಾಣಿಗಳನ್ನು ಮುಟ್ಟಲು ಅರಣ್ಯ ರಕ್ಷಕರು ಬಿಡುವುದಿಲ್ಲ. ಇತ್ತ ಕೃಷಿ ಮಾಡೋಣವೆಂದರೆ ಭೂಮಿಯೂ ಇಲ್ಲ.
ಹೀಗಾಗಿ ಇದ್ದ ಬೇಟೆ ವೃತ್ತಿ ಕೈಬಿಟ್ಟಿದೆ. ಬೇಟೆಯಾಡುತ್ತಿದ್ದ ಹಲವು ಕೈಗಳಿಗೆ ಇಂದು ಭಿಕ್ಷೆ ಬೇಡುವ ಪರಿಸ್ಥಿತಿ. ಈ ದೈನೇಸಿ ಜೀವನ ಸಾಗಿಸುತ್ತಿರುವವರು ಹಕ್ಕಿಪಿಕ್ಕಿ ಸಮುದಾಯ.
ಹುಟ್ಟೂರು ದೂರದ ಗುಜರಾತ್. ಸ್ವಾತಂತ್ರ್ಯಪೂರ್ವದಲ್ಲಿ ಕಾಡುಮೇಡುಗಳಲ್ಲಿ ಬೇಟೆಯಾಡುತ್ತಾ ದೇಶದ ವಿವಿಧ ರಾಜ್ಯಗಳಲ್ಲಿ ಹಂಚಿಹೋಗಿದೆ ಈ ಸಮುದಾಯ. ಅದೇ ರೀತಿ ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಮೊದಲು ನೆಲೆಗೊಂಡರು. ಸುತ್ತಲೂ ಇರುವ ಸಣ್ಣಪುಟ್ಟ ಕಾಡಿನಲ್ಲಿ ಬೇಟೆಯಾಡುತ್ತಾ ಕೈಗೆ ಸಿಕ್ಕ ಕಾಡು ಪ್ರಾಣಿಗಳನ್ನು ಒಡೆದುರುಳಿಸುತ್ತಿದ್ದರು. ಹೀಗೆ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದರು.
ಇದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು. ಆದರೆ, ದಿನ ಕಳೆದಂತೆ ಅರಣ್ಯ ಕಾನೂನುಗಳು ಬಿಗಿಗೊಳ್ಳುತ್ತಾ ಬಂದವು. ಪರಿಣಾಮ ಈ ಹಕ್ಕಿಪಿಕ್ಕಿ ಸಮುದಾಯ ಕಕ್ಕಾಬಿಕ್ಕಿಯಾಯಿತು. ಏಕೆಂದರೆ, ನಂಬಿಕೊಂಡಿದ್ದ ಬೇಟೆಯನ್ನೇ ಇಂತಹ ಕಠಿಣ ಕಾನೂನುಗಳು ಕಿತ್ತುಕೊಂಡಿದ್ದವು.
ರಾಜ್ಯದಲ್ಲಿ ಹೆಗ್ಗಡದೇವನಕೋಟೆ, ನಾಗಮಂಗಲ, ಕೆಂಗೇರಿ, ಪಾಂಡವಪುರ, ಚಾಮರಾಜನಗರ, ಶಿವಮೊಗ್ಗ, ಕೋಲಾರ, ಬೀದರ್, ಕುಂಬಳಗೋಡು, ಚಿಕ್ಕಬಳ್ಳಾಪುರ, ಕನಕಪುರ, ಹುಬ್ಬಳ್ಳಿ, ಬನ್ನೇರುಘಟ್ಟ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈ ಸಮುದಾಯದ ಕುಟುಂಬಗಳಿವೆ.
ಬೇಟೆಯಾಡುತ್ತಾ ಊರಿಂದ ಊರಿಗೆ ಅಲೆಯುತ್ತಿದ್ದ ಇವರನ್ನು ಆದಿವಾಸಿ ಅಲೆಮಾರಿ ಬುಡಕಟ್ಟು ಸಮುದಾಯದ ವರ್ಗವೆಂದು ಹೇಳಲಾಗುತ್ತದೆ. ಹತ್ತಾರು ಕುಟುಂಬಗಳು ಸೇರಿ ಊರಿನ ಹೊರಗೆ ಖಾಲಿ ಜಾಗವೊಂದರಲ್ಲಿ ಟೆಂಟ್್ಗಳನ್ನು ಹಾಕಿಕೊಂಡು ಅಲ್ಲಿಯೇ ಕೆಲ ದಿನ ಅಥವಾ ತಿಂಗಳ ಕಾಲ ಜೀವನ ಸಾಗಿಸುತ್ತಿದ್ದರು.
ಹೀಗೆ ಹುಣಸೂರು ತಾಲೂಕಿನ ಒಂದು ಪ್ರದೇಶದಲ್ಲಿ ವಾಸವಾಗಿದ್ದ ಈ ಸಮುದಾಯವನ್ನು ಕಂಡುಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಮಮ್ಮಲ ಮರುಗಿದ್ದರು. ಸಮುದಾಯಕ್ಕೆ ಒಂದು ನೆಲೆ ನೀಡಬೇಕೆಂದು ಪಣ ತೊಟ್ಟ ಅರಸು ಅವರು ಹಕ್ಕಿಪಿಕ್ಕಿ ಕುಟುಂಬಗಳು ನೆಲೆಸಿದ್ದ ಪ್ರದೇಶವನ್ನೇ 'ಪಕ್ಷಿರಾಜಪುರ' ಎಂದುನಾಮಕರಣ ಮಾಡಿದರು. ಈ ಪ್ರದೇಶದಿಂದ 2 ಕಿಲೋ ಮೀಟರ್ ದೂರದಲ್ಲಿ ವಾಸಿಸುತ್ತಿದ್ದ ಪ್ರದೇಶಕ್ಕೆ ಎರಡನೇ ಪಕ್ಷಿರಾಜಪುರ ಎಂದು ನಾಮಕರಣ ಮಾಡಿದರು. ಗರುಡ ಚಿಹ್ನೆಯನ್ನೂ ನೀಡಿದ್ದರಂತೆ. ಅಂದಿನಿಂದ ಇಂದಿನವರೆಗೆ ಸಮುದಾಯದವರ ಬೇಟೆಗೆ ಪಕ್ಷಿಗಳು ಸಿಗದಿದ್ದರೂ ಇವರು ಪಕ್ಷಿರಾಜರಾಗಿದ್ದಾರೆ.
ಹೀಗೆ ವಿವಿಧ ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿರುವ ಸಮುದಾಯಕ್ಕೆ ಸೇರಿದ ಸುಮಾರು 25 ರಿಂದ 30 ಸಾವಿರ ಜನರಿದ್ದಾರೆ.
ಇವರಲ್ಲಿ ಬೇಟೆ ಸ್ಥಗಿತಗೊಳ್ಳುತ್ತಿದ್ದಂತೆ ಹಕ್ಕಿಪಿಕ್ಕಿಗಳಿಗೆ ದಿಕ್ಕು ತೋಚದಂತಾಯಿತು. ಇದೇ ವೇಳೆ ಸ್ವಲ್ಪ ಮಟ್ಟಿಗೆ ನೆರವಿಗೆ ಬಂದದ್ದು ಸರ್ಕಾರ. ಕೆಲವು ಹಳ್ಳಿಗಳ ಹಕ್ಕಿಪಿಕ್ಕಿ ಕುಟುಂಬಗಳಿಗೆ ಸರ್ಕಾರದ ಭೂಮಿಯನ್ನು ವ್ಯವಸಾಯ ಮಾಡಲು ಬಿಟ್ಟುಕೊಟ್ಟಿತು. ಈ ಜಮೀನಿನಲ್ಲಿ ಕೆಲವರು ಕೃಷಿಯನ್ನು ನಡೆಸಿದರೆ, ಮತ್ತೆ ಕೆಲವರು ಅಲೆಮಾರಿಗಳಾದರು. ಊರಿಂದ ಊರಿಗೆ ವಲಸೆ ಹೋಗುತ್ತಾ ಸಣ್ಣ ಪುಟ್ಟ ಕೂಲಿ ಕೆಲಸಗಳನ್ನು ರೂಢಿಸಿಕೊಂಡು ಬಂದಿದ್ದಾರೆ.
ಸಮುದಾಯದ ವಿಶೇಷವೆಂದರೆ, ಬಹುತೇಕ ಜನ ಆಸ್ಪತ್ರೆ ಮುಖವನ್ನೇ ನೋಡುವುದಿಲ್ಲ. ಏಕೆಂದರೆ, ಬೇಟೆಯಾಡುತ್ತಾ ಕಾಡಿಗೆ ಹೋಗುತ್ತಿದ್ದ ಅವರು ಬೇಟೆಯ ಜತೆಗೆ ಗಿಡಮೂಲಿಕೆಗಳನ್ನೂ ಸಂಗ್ರಹಿಸುತ್ತಿದ್ದರು. ಇದೇ ಅವರಿಗೆ ಸಿದ್ಧೌಷಧ. ಎಂತಹ ರೋಗವಾದರೂ ಗಿಡಮೂಲಿಕೆಗಳಿಂದ ತಯಾರಿಸುವ ಔಷಧಿಯನ್ನು ನೀಡುವುದು ವಾಡಿಕೆ. ಇಂತಹ ಔಷಧಿಯನ್ನು ತಯಾರಿಸುವ ವೃತ್ತಿಯನ್ನೇ ಕೆಲವರು ಮುಂದುವರೆಸಿದ್ದಾರೆ.
ಮತ್ತೆ ಕೆಲವು ಕುಟುಂಬಗಳ ಮಹಿಳೆಯರು ಕಟ್ಟುವ ಪ್ಲಾಸ್ಟಿಕ್ ಹೂವು, ತೋರಣವನ್ನು ಪುರುಷರು ನಗರ, ಪಟ್ಟಣ ಪ್ರದೇಶಗಳಿಗೆ ತಂದು ಮಾರಾಟ ಮಾಡುತ್ತಾರೆ.
ಬಹುತೇಕ ಮಂದಿ ಅನಕ್ಷರಸ್ಥರಾದರೂ ವ್ಯಾಪಾರ ವೃತ್ತಿಯಲ್ಲಿ ಹಿಂದೆ ಬಿದ್ದಿಲ್ಲ. ಪ್ಲಾಸ್ಟಿಕ್ ಹೂವು ಸೇರಿದಂತೆ ಹತ್ತು ಹಲವಾರು ಅಲಂಕಾರಿಕಾ ವಸ್ತುಗಳನ್ನು ಹೊರ ರಾಜ್ಯಗಳಿಂದ ಖರೀದಿಸಿ ನಮ್ಮ ರಾಜ್ಯದ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ. ನಗರ ಪ್ರದೇಶಗಳಲ್ಲಿ ಆಯೋಜನೆಗೊಳ್ಳಲಿರುವ ವಸ್ತು ಪ್ರದರ್ಶನಗಳಲ್ಲಿ ಇವರದೊಂದು ಮಳಿಗೆ ಇರುತ್ತದೆ. ಅಲ್ಲಿ ಅಲಂಕಾರಿಕಾ ವಸ್ತುಗಳನ್ನು ಪ್ರದರ್ಶನಕ್ಕಿಡುತ್ತಾರೆ.
ಇದರೊಂದಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳು ಮತ್ತು ಇತರೆ ವಸ್ತುಗಳ ಬಗ್ಗೆ ಮಾಹಿತಿಯನ್ನೂ ನೀಡುತ್ತಾರೆ ಮತ್ತು ವಸ್ತುಗಳ ಮಾರಾಟವನ್ನೂ ಮಾಡುತ್ತಾರೆ. ಇದರಲ್ಲಿ ಬಂದ ಅಲ್ಪಸ್ವಲ್ಪ ಲಾಭದಿಂದ ಜೀವನ ಸಾಗುತ್ತಿದೆ.
ಇಂತಹ ವ್ಯಾಪಾರದಲ್ಲಿ ತೊಡಗಿರುವ ಈ ವರ್ಗ ಒಂದು ರೀತಿಯಲ್ಲಿ ಎಲೈಟ್ ಗುಂಪಿಗೆ ಸೇರಿದ್ದು.
ನಗರ ಪ್ರದೇಶದಲ್ಲಿ ಇನ್ನೂ ಒಂದು ವರ್ಗವಿದೆ. ಬೆಂಗಳೂರಿನಂತಹ ನಗರಗಳಲ್ಲಿ ವಾಸಿಸುತ್ತಿರುವ ಈ ಸಮುದಾಯದ ಕುಟುಂಬಗಳಲ್ಲಿ ಕೆಲವು ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿದ್ದರೆ, ಮತ್ತೆ ಕೆಲವು ರಸ್ತೆ ಬದಿಯಲ್ಲಿ, ವೃತ್ತಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಕಾಯಕ ಮುಂದುವರೆಸಿವೆ.
ಗ್ರಾಮಾಂತರ ಪ್ರದೇಶದಲ್ಲಿರುವ ಮತ್ತು ಕಾಡಿನಂಚಿನಲ್ಲಿರುವ ಹಕ್ಕಿಪಿಕ್ಕಿ ಸಮುದಾಯ ಬಹುತೇಕ ಬೇಟೆಗಾರಿಕೆಯನ್ನು ನಿಲ್ಲಿಸಿದ್ದರೂ ಅರಣ್ಯ ಅಥವಾ ಅದರ ಸುತ್ತಮುತ್ತ ಯಾವುದಾದರೂ ಪ್ರಾಣಿ ಸಾವನ್ನಪ್ಪಿದರೆ ಇವರೇ ಕಾರಣಕರ್ತರೆಂಬ ಕೇಸುಗಳನ್ನು ಹಾಕಲಾಗುತ್ತಿದೆ. ಈ ಮೂಲಕ ಅರಣ್ಯ ಮತ್ತು ಪೊಲೀಸ್ ಇಲಾಖೆ ಕಿರುಕುಳ ನೀಡುತ್ತಿವೆ ಎಂಬ ಅಳಲನ್ನು ಸಮುದಾಯ ತೋಡಿಕೊಳ್ಳುತ್ತಿದೆ. ಆದರೆ, ಇದಕ್ಕೆ ಕಿವಿಗೊಡುವ ಗೋಜಿಗೆ ಯಾರೂ ಹೋಗುತ್ತಿಲ್ಲ.
ಸಾಮಾಜಿಕವಾಗಿ ತೀರ ಹಿಂದುಳಿದಿರುವ ಈ ಸಮುದಾಯವನ್ನು ಪರಿಶಿಷ್ಟ ಪಂಗಡವೆಂದು ಪರಿಗಣಿಸಲಾಗಿದೆ. ಉದ್ಯೋಗ, ಶಿಕ್ಷಣ ಸೇರಿದಂತೆ ಮತ್ತಿತರೆ ಮೀಸಲಾತಿಯೂ ಈ ವರ್ಗಕ್ಕಿದೆ. ಆದರೆ, ಮಾಹಿತಿ ಮತ್ತು ಸಂಪರ್ಕದ ಕೊರತೆ, ಅವಿದ್ಯಾವಂತರಿಂದಾಗಿ ಮೀಸಲಾತಿ ಸೌಲಭ್ಯ ಸಮರ್ಪಕವಾಗಿ ತಲುಪುತ್ತಿಲ್ಲ. ಉದ್ಯೋಗ ಪಡೆದುಕೊಳ್ಳುವಂತಹ ವಿದ್ಯಾರ್ಹತೆ ಇಲ್ಲದವರೇ ಇದ್ದಾರೆ. ಹೀಗಾಗಿ ಸರ್ಕಾರಿ ಉದ್ಯೋಗವೆಂಬುದು ಇವರಿಗೆ ಗಗನ ಕುಸುಮವಾಗಿದೆ.
ನಗರ ಪ್ರದೇಶಗಳಲ್ಲಿ ಓಡಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಮುದಾಯದಲ್ಲಿ ಸ್ವಲ್ಪ ಜಾಗೃತಿ ಮೂಡುತ್ತಿದೆ. ಇತರರನ್ನು ಪ್ರಶ್ನಿಸುವ ಸಾಮಾನ್ಯ ಜ್ಞಾನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಹತ್ತನೇ ತರಗತಿ ಪೂರ್ಣಗೊಳಿಸಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಸುಮಾರು 10 ಕ್ಕೂ ಹೆಚ್ಚು ಮಂದಿ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾಗಿ ಜನಪ್ರತಿನಿಧಿಗಳಾಗಿದ್ದಾರೆ. ಈ ಮೂಲಕ ತಮ್ಮ ಸಮುದಾಯ ಇರುವ ಗ್ರಾಮಗಳ ಉದ್ಧಾರಕ್ಕಾಗಿ ಪಣ ತೊಟ್ಟಿದ್ದಾರೆ.
ಈ ಸ್ವಲ್ಪ ಮಟ್ಟಿನ ಶೈಕ್ಷಣಿಕ ಏಳ್ಗೆಯನ್ನು ಹೊರತುಪಡಿಸಿದರೆ ಹಕ್ಕಿಪಿಕ್ಕಿ ಸಮುದಾಯ ಆರ್ಥಿಕವಾಗಿಯಾಗಲೀ ಅಥವಾ ಸಾಮಾಜಿಕವಾಗಿಯಾಗಲೀ ಮುಂದೆ ಬರಲು ಇನ್ನೂ ಎಣಗಾಡುತ್ತಿದೆ.
ಗುಜರಾತಿ ಇವರ ಮಾತೃಭಾಷೆ. ಮರಾಠಿ, ಕೊಂಕಣಿ, ಹಿಂದಿ ಭಾಷೆಗಳ ಮಂದಿ ಇವರ ಭಾಷೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು.
ಸಮುದಾಯದಲ್ಲಿ ಪ್ರಮುಖವಾಗಿ ಕಾಳಿವಾಳ್, ಮೆವಾಡು ಮತ್ತು ಗುಜರಾತೋ ಎಂಬ ಮೂರು ಪಂಗಡಗಳಿವೆ.
ಈ ಮೂರು ಪಂಗಡಗಳ ಮಧ್ಯೆ ಸಂಬಂಧಗಳು ಬೆಳೆಯುತ್ತವೆ. ಆದರೆ, ಆಚರಣೆ ಮಾತ್ರ ಸ್ವಲ್ಪ ವಿಭಿನ್ನ.
ಕಾಳಿವಾಳ್ ಪಂಗಡದವರು ಕಾಳಿಕಾದೇವಿಯನ್ನು ಪೂಜಿಸಿದರೆ, ಮೆವಾಡು ಅವರಿಗೆ ಯಲ್ಲಮ್ಮ ಆರಾಧ್ಯದೈವ. ಗುಜರಾತೋ ಅವರಿಗೆ ಚಾಮುಂಡಿದೇವಿ.
ಹಬ್ಬ ಹರಿದಿನಗಳಲ್ಲಿ ಗುಜರಾತೋ ಪಂಗಡದವರು ದೇವಿಗೆ ಕೋಣವನ್ನು ಬಲಿ ಕೊಟ್ಟರೆ, ಉಳಿದೆರಡು ಪಂಗಡಗಳು ಕುರಿಯನ್ನು ಬಲಿ ಕೊಡುತ್ತವೆ. ಕಾಳಿವಾಳ್ ಮತ್ತು ಮೆವಾಡ್ ಪಂಗಡದ ಹೆಣ್ಣು ಗುಜರಾತೋ ಪಂಗಡದ ಗಂಡನ್ನು ಮದುವೆಯಾದರೆ ತನ್ನ ತವರು ಮನೆಯಲ್ಲಿ ಹಬ್ಬಗಳಂದು ಬಲಿ ಕೊಡುವ ಕುರಿಯನ್ನು ತಿನ್ನುವಂತಿಲ್ಲ. ಅದೇ ರೀತಿ ಗುಜರಾತೋ ಪಂಗಡದ ಹೆಣ್ಣು ಕಾಳಿವಾಳ್ ಅಥವಾ ಮೆವಾಡ್ ಪಂಗಡದ ಗಂಡನ್ನು ಮದುವೆಯಾದರೆ ತನ್ನ ತವರು ಮನೆಯಲ್ಲಿ ಬಲಿಕೊಡುವ ಕೋಣವನ್ನು ತಿನ್ನುವುದು ನಿಷಿದ್ಧ.
ನಮ್ಮ ಸಮುದಾಯಕ್ಕೆ ಸರ್ಕಾರದ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ. ಇದುವರೆಗೆ ಸೌಲಭ್ಯಗಳು ಇವೆ ಎಂಬುದೇ ಗೊತ್ತಾಗದೇ ಸಮುದಾಯ
ಕತ್ತಲಲ್ಲಿತ್ತು. ನಮಗೆ ಮೊದಲು ಆಗಬೇಕಿರುವ ಕೆಲಸವೆಂದರೆ ಸಮುದಾಯದ ಹೆಚ್ಚು ಕುಟುಂಬಗಳು ಇರುವ ಕಡೆ ಶಾಲೆ ಮತ್ತು ಹಾಸ್ಟೆಲ್ ಆರಂಭಿಸಬೇಕು.
ಅದೇ ರೀತಿ ನಮ್ಮ ಕೃಷಿ ಭೂಮಿಗಳನ್ನು ನೀರಾವರಿ ವ್ಯವಸ್ಥೆಗೆ ಸೇರಿಸಬೇಕು -ಶೀನು ಸತೀಶ್್ಕುಮಾರ್, ಹಕ್ಕಿಪಿಕ್ಕಿ ಸಮುದಾಯದ ನಾಯಕಿ.

ಅಭಿವೃದ್ಧಿ ಕಾಣಬೇಕಿರುವ ಹೆಳವರು

ಇವರ ಒಟ್ಟು ಸಂಖ್ಯೆ ಸುಮಾರು 80 ಸಾವಿರ. ಇದಿಷ್ಟೇ ಜನರಿಗೆ 180 ಕ್ಕೂ ಹೆಚ್ಚು ಬೆಡಗುಗಳು ಅಥವಾ ಕುಲಗಳು. ಅಂದರೆ, ಪ್ರತಿ 444 ಜನರಿಗೆ ಒಂದು ಕುಲ!
ಅಲ್ಪಸ್ವಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೂ ವೃತ್ತಿ ಭಿಕ್ಷಾಟನೆ. ಇವರು ಅಂಗವಿಕಲರಲ್ಲ. ಆದರೂ ಅಂಗವೈಕಲ್ಯತೆಗೆ ಸಮಾನವಾದ ಪದದಿಂದ ಸಂಬೋಧಿಸಲಾಗುತ್ತದೆ.
ಅವರೇ ಹೆಳವರು.
ಗ್ರಾಮೀಣ ಪ್ರದೇಶದಲ್ಲಿ ಹೆಳವ ಎಂದರೆ ಸ್ವಾಧೀನ ಕಳೆದುಕೊಂಡ ಕಾಲನ್ನು ಹೊಂದಿರುವವನೆಂದರ್ಥ. ಹೆಳವ ಎಂಬುದು ಒಂದು ಬುಡಕಟ್ಟು ಸಮುದಾಯದ ಹೆಸರು. ಈ ಸಮುದಾಯಕ್ಕೆ ಹೆಳವ ಎಂಬ ಹೆಸರು ಬಂದಿದ್ದಕ್ಕೆ ಹಲವಾರು ಐತಿಹ್ಯಗಳಿವೆ. ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ವ್ಯವಸಾಯ ಮಾಡುವ ಒಂದು ಕುಟುಂಬದಲ್ಲಿ 6 ಮಂದಿ ಗಂಡು ಮಕ್ಕಳಿರುತ್ತಾರೆ. ಅದರಲ್ಲಿ ಒಬ್ಬನಿಗೆ ಕಾಲು ಊನವಾಗಿರುತ್ತದೆ. ಆದರೆ, ಉಳಿದ ಐವರಿಗೆ ಈತನನ್ನು ಕಂಡರೆ ಆಗಿಬರುತ್ತಿರಲಿಲ್ಲ.
ಏಕೆಂದರೆ ನಾವೆಲ್ಲಾ ದುಡಿದು ತಂದಿದ್ದನ್ನು ಈತ ತಿನ್ನುತ್ತಾನೆ ಎಂಬ ಅಲಕ್ಷ್ಯ ಅವರಿಗಿತ್ತು. ಆದರೆ, ತಾಯಿಗೆ ಮಾತ್ರ ಈ ಊನ ಮಗನನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಇದರಿಂದ ಆಕ್ರೋಶಗೊಂಡ ಐವರು ಅಣ್ಣತಮ್ಮಂದಿರು ಕುಂಟ ಸೋದರನನ್ನು ಹತ್ಯೆ ಮಾಡಲೂ ಮುಂದಾಗುತ್ತಾರೆ. ಆದರೆ, ಮನೆಯಲ್ಲಿ ಸಾಕಿದ್ದ ಬಸವ(ಎತ್ತು) ಪ್ರತಿ ಸಂದರ್ಭದಲ್ಲೂ ಕುಂಟನ ನೆರವಿಗೆ ಬರುತ್ತದೆ.
ಕಡೆಗೊಂದು ದಿನ ಆಸ್ತಿ ಪಾಲು ಮಾಡುವ ಸಂದರ್ಭದಲ್ಲಿ ಮನೆಯ ಹಿರಿಯರೆಲ್ಲಾ ಮಕ್ಕಳನ್ನು ಕೂರಿಸಿ ಐವರು ಮಕ್ಕಳಿಗೆ ಆಸ್ತಿ ಪಾಲು ಮಾಡುತ್ತಾರೆ. ಕುಂಟನಿಗೆ ಸ್ವಂತಕ್ಕೆ ದುಡಿದು ತಿನ್ನುವ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಆತನ ಮುದ್ದಿನ ಎತ್ತು ಮತ್ತು ಗಂಟೆಯನ್ನು ನೀಡುತ್ತಾರೆ. ಈತ ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಎತ್ತಿನ ಮೇಲೆ ಸವಾರಿ ಮಾಡಿ ಗಂಟೆಯನ್ನು ಬಾರಿಸುತ್ತಾ ಐವರು ಸೋದರರ ಮನೆಗೆ ಹೋಗಿ ತನ್ನ ಪಾಲಿನ ಕಾಳು ಕಡ್ಡಿಯನ್ನು ಭಿಕ್ಷಾ ರೂಪದಲ್ಲಿ ತಂದು ತಿನ್ನಬೇಕೆಂಬ ಷರತ್ತು ವಿಧಿಸುತ್ತಾರೆ.
ಕಾಲಕ್ರಮೇಣ ಈ ಕುಂಟನ ವಂಶವೃಕ್ಷ ಬೆಳೆಯಿತಾದರೂ ಕುಟುಂಬದಲ್ಲಿ ಯಾರೂ ಊನಗೊಂಡವರಿರಲಿಲ್ಲ. ಆದರೆ, ಅಪ್ಪ ಮಾಡಿದ ಭಿಕ್ಷಾಟನೆಯನ್ನು ಮಕ್ಕಳು, ಅವರ ಮಕ್ಕಳು ಮುಂದುವರೆಸುತ್ತಾ ಬಂದರು. ಇದು ಮುಂದೊಂದು ದಿನ ದೊಡ್ಡ ಸಂಸಾರವಾಗಿ ರೂಪುಗೊಂಡಿದೆ. ಇದೇ ಕಾರಣಕ್ಕಾಗಿ ಈ ಕುಟುಂಬ ಅಥವಾ ವಂಶವನ್ನು 'ಹೆಳವ' ಎಂದು ಕರೆಯಲಾಯಿತು ಎಂಬ ಪ್ರತೀತಿ ಪುರಾಣಗಳಲ್ಲಿ ದಾಖಲಾಗಿದೆ.
ಭಿಕ್ಷಾಟನೆ ಒಕ್ಕಲಿಗರ ಅಥವಾ ಕೃಷಿಕರ ಮನೆಯಲ್ಲಿ ಭಿಕ್ಷೆ ಎತ್ತುವ ಈ ಕಾಯಕ ಇಂದಿಗೂ ಮುಂದುವರೆದಿದೆ.
ಎತ್ತಿನ ಮೇಲೆ ಸವಾರಿ ಮಾಡುತ್ತಾ ಇಡೀ ಕುಟುಂಬದೊಂದಿಗೆ ಊರಿಂದ ಊರಿಗೆ ಅಲೆಯುತ್ತಾ ಬಂದಿದ್ದ ಈ ಸಮುದಾಯವನ್ನು ಅಲೆಮಾರಿಗಳೆಂದು ಪರಿಗಣಿಸಲಾಗಿದೆ. ಇವರನ್ನು ಬುಡಕಟ್ಟು ವರ್ಗದವರೆಂದು ಹೇಳಲಾಗುತ್ತಿದ್ದರೂ ಕಾಡು ಮೇಡುಗಳಲ್ಲಿ ಜೀವಿಸುವುದಿಲ್ಲ. ಜನವಸತಿ ಪ್ರದೇಶಗಳಲ್ಲಿ ಜನರೊಂದಿಗೆ ಬೆರೆತು ಜೀವನ ಸಾಗಿಸುತ್ತಿದ್ದಾರೆ. ಅಲೆಮಾರಿಗಳು ಎಂದು ಕರೆಯಿಸಿಕೊಂಡಿದ್ದರೂ ಇತ್ತೀಚಿನ ದಿನಮಾನದಲ್ಲಿ ಹೆಳವರು ಒಂದು ಊರಿನಲ್ಲಿ ನೆಲೆ ನಿಂತಿದ್ದಾರೆ. ಆ ಊರಿನಿಂದಲೇ ತಮ್ಮ ಭಿಕ್ಷಾಟನೆ ಕಾಯಕವನ್ನು ನಡೆಸುತ್ತಿದ್ದಾರೆ.
ಈ ಸಮುದಾಯದ ಹೆಚ್ಚು ಜನ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲೇ ವಾಸವಾಗಿದ್ದರೆ. ಅಂದರೆ, ಈ ಜಿಲ್ಲೆಯಲ್ಲಿ ಸುಮಾರು 14 ಸಾವಿರದಷ್ಟು ಜನ ಇದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಸುಮಾರು 12 ಸಾವಿರದಷ್ಟಿದ್ದಾರೆ.
ಉಳಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿರುವ ಸಮುದಾಯದ ಒಟ್ಟು ಕುಟುಂಬಗಳ ಸಂಖ್ಯೆ ಸುಮಾರು 14 ಸಾವಿರ ಇದ್ದರೆ, ಜನಸಂಖ್ಯೆ ಸುಮಾರು 80 ಸಾವಿರ.
ಈ ಸಮುದಾಯದಲ್ಲಿ ಪ್ರಮುಖವಾಗಿ ಎತ್ತಿನ ಹೆಳವರು, ಗಂಟೆ ಹೆಳವರು ಮತ್ತು ಚಾಪೆ ಹೆಳವರು ಎಂದು ಗುರುತಿಸಲಾಗಿದೆ.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎತ್ತಿನ ಹೆಳವರು ಕಂಡುಬಂದರೆ, ದಕ್ಷಿಣ ಕರ್ನಾಟಕದಲ್ಲಿ ಗಂಟೆ ಹೆಳವರಿದ್ದಾರೆ. ಅದೇ ರೀತಿ ಬೀದರ್, ಗುಲ್ಬರ್ಗಾ, ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಚಾಪೆ ಹೆಳವರು ಜೀವಿಸುತ್ತಿದ್ದಾರೆ.
ಎತ್ತಿನ ಹೆಳವರು ಮತ್ತು ಗಂಟೆ ಹೆಳವರು ಚಾಪೆ ಹೆಳವರಿಗಿಂತ ಮೇಲ್ದರ್ಜೆಯವರೆಂದು ಹೇಳಲಾಗುತ್ತದೆ. ಏಕೆಂದರೆ, ಎತ್ತಿನವರು ಮತ್ತು ಗಂಟೆ ಹೆಳವರ ಸಂಪ್ರದಾಯಗಳಲ್ಲಿ ಬಹುತೇಕ ಸಾಮ್ಯತೆ ಕಂಡುಬರುತ್ತದೆ. ಗಂಟೆ ಹೆಳವರು ತಮ್ಮ ಬಗಲಲ್ಲಿ ದೊಡ್ಡ ಜೋಳಿಗೆ ಹಿಡಿದು ಗಂಟೆ ಬಾರಿಸುತ್ತಾ ನಿಗದಿತ ಒಕ್ಕಲುಗಳಿಗೆ ಅಂದರೆ ಕೃಷಿ ಮಾಡುವ ಒಂದು ಸಮುದಾಯದ ಮನೆಗಳಿಗೆ ಹೋಗಿ ಭಿಕ್ಷೆ ಎತ್ತುತ್ತಾರೆ. ಅವರು ಬಾರಿಸುವ ಗಂಟೆಯನ್ನು ಒಕ್ಕಲುಗಳೇ ಕೊಡಿಸಿರುತ್ತಾರೆ. ಅವರು ಕೊಡಿಸಿದ ಗಂಟೆಯನ್ನು ಅದೇ ಒಕ್ಕಲುಗಳಲ್ಲಿ ಬಾರಿಸಬೇಕು. ಒಂದು ಒಕ್ಕಲಿನ ಗಂಟೆಯನ್ನು ಮತ್ತೊಂದು ಒಕ್ಕಲಲ್ಲಿ ಬಾರಿಸಿದರೆ ಅದು ಅಪರಾಧವಾದಂತೆ.
ಆದರೆ, ಎತ್ತಿನ ಹೆಳವರು ಎತ್ತಿನ ಮೇಲೆ ಸವಾರಿ ಮಾಡಿಕೊಂಡು ಭಿಕ್ಷಾಟನೆ ಮಾಡುತ್ತಾರೆ. ಇದೊಂದು ವೈರುಧ್ಯ ಬಿಟ್ಟರೆ ಎರಡೂ ಪಂಗಡಗಳಲ್ಲಿ ಒಂದೇ ರೀತಿಯ ಸಂಪ್ರದಾಯವಿದೆ.
ಆದರೆ, ಭಿಕ್ಷಾಟನೆಯಲ್ಲಿ ತೊಡಗಿದರೂ ಚಾಪೆ ಹೆಳವರು ಹಂದಿಯನ್ನು ಸಾಕುತ್ತಾರೆ. ಇವರಿಗೆ ಇಂತಹದ್ದೇ ಒಕ್ಕಲಲ್ಲಿ ಭಿಕ್ಷೆ ಬೇಡಬೇಕೆಂಬ ನಿಬಂಧನೆಯೂ ಇಲ್ಲ. ಹೀಗಾಗಿ ಈ ಸಮುದಾಯ ಕೀಳು ಎಂದು ನಂಬಲಾಗಿದೆ.
ಎತ್ತಿನ ಮತ್ತು ಗಂಟೆ ಹೆಳವರ ಮಧ್ಯೆ ವೈವಾಹಿಕ ಸಂಬಂಧಗಳು ಇವೆಯಾದರೂ ಈ ಪಂಗಡಗಳು ಚಾಪೆ ಹೆಳವರ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ.
ಕೆಲವೇ ಕೆಲವು ಸಾವಿರದಷ್ಟು ಜನಸಂಖ್ಯೆ ಇರುವ ಈ ಮೂರು ಪಂಗಡಗಳಲ್ಲಿ ಅರಳಿ ಕುಲ, ಬಳಗಾರ ಕುಲ, ಬೆಳಗೂಗಿನವರು, ಬೇವಿನವರು, ಬೊಮ್ಮ, ಮಂಗಲವರು, ಮುತ್ತಿನ ಸತ್ತರಗಿಲವರು, ಮನೆಗಲವರು, ವಜಮೂನಿಯವರು, ಸಂಕಲವರು, ಸದರಿನವರು, ಹಾವುಲವರು, ಬಂಡಿಕುಲ, ಬಂಗಾರ ಕುಲ, ಗಂಟ ಕುಲ, ಜ್ಯೋತಿಕುಲ ... ಹೀಗೆ ಬರೋಬ್ಬರಿ 180 ಕ್ಕೂ ಅಧಿಕ ಬೆಡಗುಗಳಿವೆ.
ಇವರನ್ನು 'ಕುಲ ಕೊಂಡಾಡುವರು' ಎಂತಲೂ ಕರೆಯಲಾಗುತ್ತದೆ. ಏಕೆಂದರೆ, ಕೈಲೊಂದು ದಪ್ಪನೆಯ ಪುಸ್ತಕ. ಆ ಪುಸ್ತಕದಲ್ಲಿ ಭಿಕ್ಷಾಟನೆಗೆ ಹೋಗುವ ಒಕ್ಕಲುಗಳ ವಂಶವಾಳಿಯನ್ನು ನಮೂದಿಸಿರುತ್ತಾರೆ. ಇದನ್ನೇ ಭಿಕ್ಷಾಟನೆ ಸಂದರ್ಭದಲ್ಲಿ ಹೇಳಿ ಭಿಕ್ಷೆ ನೀಡುವಂತೆ ಮನವೊಲಿಸುತ್ತಾರೆ. ಇಂತಹ ಬೃಹತ್ ಪುಸ್ತಕಕ್ಕೆ ಚಿಪ್ಪೋಡು ಎನ್ನಲಾಗುತ್ತದೆ.
ಅನಾದಿ ಕಾಲದಿಂದಲೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುತ್ತಾ ಬಂದಿರುವ ಹೆಳವರ ಪರಿಸ್ಥಿತಿಯಲ್ಲಿ ಪ್ರಸ್ತುತ ಯಾವುದೇ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ಕೃಷಿಯನ್ನು ಅವಲಂಬಿಸಿದ್ದ ಒಕ್ಕಲುಗಳಲ್ಲಿ ಬಹುತೇಕ ಮಂದಿ ವೃತ್ತಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇಲ್ಲವೇ ಪರ್ಯಾಯ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ಈ ಒಕ್ಕಲುಗಳನ್ನೇ ನಂಬಿದ್ದ ಹೆಳವರಿಗೆ ಭಿಕ್ಷೆ ಇಲ್ಲದಂತಾಗಿದೆ.
ಹೀಗಾಗಿ ಭಿಕ್ಷಾಟನೆಯನ್ನು ಕೈಬಿಟ್ಟಿರುವ ಬಹುತೇಕ ಕುಟುಂಬಗಳು ಕೂಲಿ ನಾಲಿ ಬದುಕು ಸವೆಸುವಂತಹ ದುಸ್ಥಿತಿ ಬಂದೊದಗಿದೆ. ಆದರೆ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಮೂಲ ವೃತ್ತಿಯನ್ನು ಬಿಡದೇ ಮುಂದುವರೆಸಿಕೊಂಡು ಬಂದಿವೆ. ಇನ್ನೂ ಕೆಲವರು ಅಲ್ಪಸ್ವಲ್ಪ ಕೃಷಿ ಭೂಮಿ ಹೊಂದಿ ಕೃಷಿಯತ್ತ ವಾಲಿದ್ದಾರೆ.
ಇನ್ನು ಶೈಕ್ಷಣಿಕವಾಗಿ ಒಂದೊಂದೇ ಹೆಜ್ಜೆ ಮುಂದೆ ಬರುತ್ತಿರುವ ಸಮುದಾಯದ ಕೆಲವರು ನ್ಯಾಯಾಧೀಶರು, ವಕೀಲರು, ವೈದ್ಯ ವೃತ್ತಿ ಸೇರಿದಂತೆ ಮತ್ತಿತರೆ ಉನ್ನತ ಹುದ್ದೆಗೇರಿದ್ದಾರೆ. ಆದರೆ, ಇಂತಹವರ ಸಂಖ್ಯೆ ಗೌಣವಾಗಿದೆ. ಆದರೆ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಎಂಬುದು ಮರೀಚಿಕೆಯಾಗಿದೆ.
ತೀರಾ ಕೆಳಸ್ತರದ ಜೀವನ ಸಾಗಿಸುತ್ತಿರುವ ಸಮುದಾಯವನ್ನು ಸರ್ಕಾರಗಳು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿವೆ. ಆದರೆ, ಇದರಿಂದಾಗಿ ಇತರೆ ಸಮುದಾಯಗಳ ಜತೆ ಮೀಸಲಾತಿ ವಿಚಾರದಲ್ಲಿ ಸ್ಪರ್ಧಿಸಲಾಗದೇ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ.
ಸಮಾಜದಲ್ಲಿ ತೀರಾ ಹಿಂದುಳಿದಿರುವ ಹೆಳವರು ಬುಡಕಟ್ಟು ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ, ಇವರನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಿರುವುದರಿಂದ ಸೂಕ್ತ ರೀತಿಯಲ್ಲಿ ಸರ್ಕಾರದ ಯಾವುದೇ ಮೀಸಲಾತಿ ಸೌಲಭ್ಯಗಳು ಸಿಗಂತಾಗಿವೆ. ಈ ಹಿನ್ನೆಲೆಯಲ್ಲಿ ಹೆಳವರು ಸೇರಿದಂತೆ ಎಲ್ಲಾ ಬುಡಕಟ್ಟು ಸಮುದಾಯಗಳಿಗೆ  ಎಸ್ಸಿ, ಎಸ್ಟಿ ಮಾದರಿಯಲ್ಲಿ ಪ್ರತ್ಯೇಕ ವರ್ಗವನ್ನು ರೂಪಿಸಿ ಪ್ರತ್ಯೇಕ ಮೀಸಲಾತಿ ನೀಡಬೇಕು. ಈ ಮೂಲಕ ಇವರಿಗೆ ಸಂವಿಧಾನಬದ್ಧವಾದ ಸೌಲಭ್ಯಗಳನ್ನು ಕಲ್ಪಿಸಿ ಅವರ ಶ್ರೇಯೋಭಿವೃದ್ಧಿಗೆ ನಾಂದಿ ಹಾಡಬೇಕಿದೆ -ಡಾ.ಎ.ಎಸ್. ಪ್ರಭಾಕರ, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ.

ಕುಣಬಿಯರ ಕಲ್ಯಾಣ ಪದ್ಧತಿಯ ಸೋಜಿಗ!

ಅಲ್ಲೊಂದು ಬೃಹದಾಕಾರವಾದ ವಡೆ. ಆ ವಡೆಯೇ ಮಧುಮಗನಿಗೆ ಅತ್ತೆ!
ಇಂತಹ ವೈಚಿತ್ರ್ಯ ಎಲ್ಲಾದರೂ ಕೇಳಿದ್ದೇವೆಯೇ?
ಇಲ್ಲ. ಆದರೂ ಇದು ಇಂದಿಗೂ ಚಾಲ್ತಿಯಲ್ಲಿರುವ ಸಂಪ್ರದಾಯ.
ರಾಜ್ಯದ ಪಶ್ಚಿಮಘಟ್ಟದಲ್ಲಿ ವಾಸಿಸುತ್ತಿರುವ ಹಲವಾರು ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಕುಣಬಿ ಸಮುದಾಯದಲ್ಲಿ ಇಂತಹ ಪದ್ಧತಿ ಜಾರಿಯಲ್ಲಿದೆ.
ಇವರ ಮದುವೆ ಸಂಪ್ರದಾಯ ನಾಗರಿಕ ಸಮಾಜವನ್ನು ಒಂದು ಕಾಣದ ಲೋಕಕ್ಕೆ ಕೊಂಡೊಯ್ಯುತ್ತದೆ.
ಎಲ್ಲಾ ಸಮುದಾಯದಂತೆ ಈ ಸಮುದಾಯದಲ್ಲಿ ಹೆಣ್ಣನ್ನು ನೋಡಲು ವರನ ಮನೆಯವರು ಮೊದಲು ಹೋಗುವುದಿಲ್ಲ. ಬದಲಿಗೆ ಊರ ಪ್ರಮುಖರೊಬ್ಬರು ವರನ ಕುಟುಂಬದ ರಾಯಭಾರಿಯಾಗಿ ವಧುವಿನ ಮನೆಗೆ ಹೋಗಿ ಹೆಣ್ಣನ್ನು ನೋಡುತ್ತಾರೆ. ಹೆಣ್ಣು ಮತ್ತು ಗಂಡಿನ ಬೆಡಗು ಒಂದೇ ಆಗಿದ್ದರೆ ಪರಸ್ಪರ ಮದುವೆಯಾಗುವಂತಿಲ್ಲ.
ಈ ರಾಯಭಾರಿ ಹೆಣ್ಣನ್ನು ನೋಡಿ ಆಕೆ ಒಪ್ಪಿಗೆಯಾದಲ್ಲಿ ಮಾತ್ರ ಹುಡುಗನ ಕುಟುಂಬಕ್ಕೆ ಸೇರಿದ ಐವರು ಮುತ್ತೈದೆಯರನ್ನು ಹುಡುಗಿಯ ಮನೆಗೆ ಕರೆದುಕೊಂಡು ಹೋಗುತ್ತಾನೆ. ಈ ಮುತ್ತೈದೆಯರು ಹೆಣ್ಣಿಗೆ ಎಣ್ಣೆ ಅರಿಶಿನ ಹಚ್ಚಿ ನಂತರ ಎಲೆ ಅಡಿಕೆ ಕೊಟ್ಟು ಪರಸ್ಪರ ಒಪ್ಪಿಗೆ ಸೂಚಿಸುತ್ತಾರೆ.
ಈ ಒಪ್ಪಿಗೆ ಆದ ಮರುದಿನವೇ ಮದುವೆ!
ಅಷ್ಟರ ವೇಳೆಗಾಗಲೇ ತಮ್ಮ ಬಂಧುಬಳಗದವರಿಗೆ ಆಹ್ವಾನ ನೀಡಲಾಗುತ್ತದೆ. ಮದುವೆ ನಡೆಯುವುದು ಹುಡುಗಿಯ ಮನೆಯಲ್ಲಲ್ಲ. ಬದಲಿಗೆ ಗಂಡಿನ ಮನೆಯ ವಿಶಾಲವಾದ ಆವರಣದಲ್ಲಿ. ಮದುವೆಯ ದಿನ ಹೆಣ್ಣು ಮತ್ತು ಗಂಡಿನ ಸೋದರ ಮಾವಂದಿರು ಎತ್ತಿಕೊಂಡು ಬಂದು ಹಸೆಮಣೆಯ ಮೇಲೆ ನಿಲ್ಲಿಸುತ್ತಾರೆ.
ಬಕುಳದ ಹೂವಿನಿಂದ ಸಿದ್ಧಪಡಿಸಿದ ಹಾರಗಳನ್ನು ಗಂಡು ಹೆಣ್ಣು ಪರಸ್ಪರ ಬದಲಾಯಿಸಿಕೊಳ್ಳುತ್ತಾರೆ. ಇದಕ್ಕೆ ಪೌರೋಹಿತ್ಯ ವಹಿಸುವುದು 'ಮಾತ್ಯಾವಳಿ ಜಾಣ' ಎಂಬ ಸಮುದಾಯದ ಹಿರಿಯ ಪೂಜಾರಿ.
ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ವಿವಾಹ ಬಂಧನವಾಗುತ್ತದೆ.
ಆದರೆ, ವಿಶಿಷ್ಟವೆಂದರೆ ಈ ಶುಭಸಮಾರಂಭದ ವೇಳೆ ವರ ತನ್ನ ಅತ್ತೆಯನ್ನು ನೋಡುವುದು ನಿಷಿದ್ಧ. ದೊಡ್ಡದಾದ ವಡೆಯೊಂದನ್ನು ತಯಾರು ಮಾಡುತ್ತಾರೆ. ಎಲ್ಲಾ ಶಾಸ್ತ್ರಗಳು ಮುಗಿಯುವವರೆಗೆ ವರನ ಪಾಲಿಗೆ ಈ ವಡೆಯೇ ಅತ್ತೆ. ಶಾಸ್ತ್ರಗಳ ನಂತರ ವಡೆಯೊಂದಿಗೆ ಅನ್ನ ಬಡಿಸುವ ಮಹಿಳೆಯೇ ಅತ್ತೆ. ಆಗಲೇ ವರ ಆಕೆಯ ಮುಖ ನೋಡುವುದು.
ಬುಡಕಟ್ಟು ಸಮುದಾಯಗಳಲ್ಲಿ ಅತ್ಯಂತ ಬಡತನದಲ್ಲಿರುವ ಸಮುದಾಯವೆಂದರೆ ಈ ಕುಣಬಿಯರು. ರಾಜ್ಯದಲ್ಲಿ ಸುಮಾರು 25 ಸಾವಿರದಷ್ಟು ಈ ಸಮುದಾಯದ ಜನಸಂಖ್ಯೆ ಇದೆ. ಬಹುತೇಕ ಕುಣಬಿಯರು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಯಲ್ಲಾಪುರ, ಅಂಕೋಲ, ಕಾರವಾರ, ಹೊನ್ನಾವರ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕುಗಳ ಪಶ್ಚಿಮಘಟದ ವನಸಿರಿಯ ಸೆರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ. ಆದರೆ, ಇವರಿಗೆ ಕುಡುಬಿಯರು ಎಂದು ಕರೆಯಲಾಗುತ್ತದೆ. ಆದರೆ, ಕುಣುಬಿಯರು ಮತ್ತು ಕುಡುಬಿಯರು ಸಮುದಾಯದ ಬಹುತೇಕ ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಸಾಮ್ಯತೆ ಕಾಣಬಹುದು.
ದಕ್ಷಿಣ ಕನ್ನಡದ ಕರಾವಳಿ ತೀರದಲ್ಲಿನ ಕುಂದಾಪುರ, ಮಂಗಳೂರು, ಉಡುಪಿ ಬಾರ್ಕೂರು, ಮಂದರ್ತಿ, ಕೊಕ್ಕರ್ಣೆ, ಸುರಾಲು, ಬಿಲ್ಲಾಡಿ, ಹೆಸ್ಕುಂದ, ಹಾಲಾಡಿ, ಬಜಪೆ, ಕೊಲ್ಲೂರು ಸೇರಿದಂತೆ ಮತ್ತಿತರರೆ ಪ್ರದೇಶಗಳಲ್ಲಿ ಕುಡುಬಿಗಳು ವಾಸಿಸುತ್ತಿದ್ದಾರೆ.
ಕುಣಬಿ ಮತ್ತು ಕುಡುಬಿಯರ ಭಾಷೆ ಪ್ರಾದೇಶಿಕತೆಗೆ ತಕ್ಕಂತೆ ಇದೆ. ಕರಾವಳಿಯಲ್ಲಿ ತುಳು, ಗೋವಾಕ್ಕೆ ಸನಿಹದಲ್ಲಿರುವ ಉತ್ತರ ಕನ್ನಡದ ಕುಣಬಿಯರು ಕೊಂಕಣಿ ಮತ್ತು ಕುಂದಾಪುರ ಸೇರಿದಂತೆ ಮತ್ತೆ ಕೆಲವು ಭಾಗದಲ್ಲಿ ಕನ್ನಡ ಮಾತನಾಡುತ್ತಾರೆ.
1795 ರಲ್ಲಿ ಫ್ರಾನ್ಸಿಸ್ ಬುಕಾನನ್ ಎಂಬ ಸಂಶೋಧಕ ಪಶ್ಚಿಮಘಟ್ಟದಲ್ಲಿ ಸುತ್ತಾಡಿ ಕುಣಬಿಯರ ಬಗ್ಗೆ ಸಂಶೋಧನೆ ನಡೆಸಿದ್ದ. ಅವನ ಪ್ರಕಾರ ಕುಣಬಿಯರು ಕರ್ನಾಟಕ ಮೂಲದವರೇ ಎಂದು ಪ್ರತಿಪಾದಿಸಿದ್ದ. ಪೋರ್ಚುಗೀಸರ ಕಾಲದಲ್ಲಿ ಪ್ಲೇಗ್ ಸಂಭವಿಸಿದ್ದರಿಂದ ಮತ್ತು ಬಲವಂತದ ಮತಾಂತರಕ್ಕೆ ಹೆದರಿ ಕುಣಬಿಯರು ಗೋವಾ ರಾಜ್ಯಕ್ಕೆ ಗುಳೇ ಹೋಗಿದ್ದರು. ನಂತರದ ಅವಧಿಯಲ್ಲಿ ಮತ್ತೆ ಕರ್ನಾಟಕಕ್ಕೆ ಬಂದರು ಎಂಬ ವಾದಗಳೂ ಇವೆ. ಆದರೆ, ಈ ಮೂಲದ ಇನ್ನೂ ತರ್ಕಗಳು ಮುಂದುವರೆದಿವೆ.
ಇವರನ್ನು ಅಲೆಮಾರಿ ಬುಡಕಟ್ಟಿಗೆ ಸೇರಿದವರೆಂದು ಹೇಳಲಾಗುತ್ತಿದೆ. ಕಾಡಿನಲ್ಲಿ ಆಹಾರ ಪದಾರ್ಥಗಳ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕಾಲ ಕ್ರಮೇಣ ಕಾಡಿನಲ್ಲೇ ಅಲ್ಪಸ್ವಲ್ಪ ಭೂಮಿಯನ್ನು ಉಳುಮೆ ಮಾಡುವುದನ್ನು ಕರಗತ ಮಾಡಿಕೊಂಡ ಸಮುದಾಯ 'ಕುಮರಿ ಬೇಸಾಯ' ಅಂದರೆ, ಸ್ಥಳಾಂತರ ಕೃಷಿ. ಖಾಲಿ ಬಿದ್ದ ಅರಣ್ಯ ಪ್ರದೇಶದ ಇಳಿಜಾರು ಪ್ರದೇಶವನ್ನು ಹಸನುಗೊಳಿಸಿ ಅಲ್ಲಿ ಬಿತ್ತನೆ ಮಾಡಿ ಚಿಲ್ಲರೆ ಆದಾಯ ಗಳಿಸುತ್ತಿದ್ದರು. ಆದರೆ, ಈ ಭೂಮಿಯ ಒಡೆಯರು ಮಾತ್ರ ಇವರಲ್ಲ. ಈ ಕೃಷಿಯನ್ನು ಅವಲಂಬಿಸಿದ ನಂತರ ಇವರು ಸ್ಥಳದಿಂದ ಸ್ಥಳಕ್ಕೆ ತಮ್ಮ ವಾಸ್ತವ್ಯವನ್ನು ಬದಲಾಯಿಸುವುದನ್ನು ಬಿಟ್ಟರು. ಹೀಗಾಗಿ ಇವರನ್ನು ಅರೆ ಅಲೆಮಾರಿಗಳು ಎನ್ನಲಾಗುತ್ತಿದೆ.
ಈ ಕುಮರಿ ಬೇಸಾಯದಿಂದ ಅಲ್ಪಸ್ವಲ್ಪ ಆದಾಯ ಗಳಿಸುತ್ತಿದ್ದ ಕುಣಬಿಯರು ದಿನ ಕಳೆದಂತೆ ಅರಣ್ಯ ಕಾನೂನುಗಳು ಕಠಿಣವಾಗುತ್ತಿದ್ದಂತೆ ಅನಿವಾರ್ಯವಾಗಿ ವೃತ್ತಿಯನ್ನು ಕೈಬಿಡಬೇಕಾಯಿತು. ಪರಿಣಾಮ ಬಹುತೇಕ ಎಲ್ಲಾ ಕುಟುಂಬಗಳು ಭೂ ಮಾಲೀಕರ ತೋಟ, ಗದ್ದೆಗಳಲ್ಲಿ ಕೂಲಿ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿವೆ. ಹೀಗಾಗಿ ತೀರಾ ಕಡುಬಡತನದ ಸೆರಗಿನಲ್ಲೇ ವಾಸಿಸುತ್ತಿರುವ ಇವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಈಗೇನೂ ಬದಲಾವಣೆಯಾಗಿಲ್ಲ. ಭೂಮಾಲೀಕರ ಶೋಷಣೆ ತಪ್ಪಿಲ್ಲ.
ಪ್ರಸ್ತುತ ಸನ್ನಿವೇಶದಲ್ಲಿ ಆಶ್ರಯ ನೀಡಿದ್ದ ಅರಣ್ಯ ಭೂಮಿ ಇವರ ಕೈತಪ್ಪಿ ಹೋಗಿದೆ. ಆಹಾರ ಸಂಗ್ರಹಣೆ ಮಾಡುವಂತಿಲ್ಲ. ಬೇಟೆಯಂತೂ ನಿಷಿದ್ಧ. ಈ ಎಲ್ಲಾ ಕಾರಣಗಳಿಂದಾಗಿ ಕಡುಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಈ ಸಮುದಾಯ ಮತ್ತಷ್ಟು ಕೆಳಸ್ತರಕ್ಕೆ ತಳ್ಳಲ್ಪಟ್ಟಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಬುಡಕಟ್ಟು ಸಮುದಾಯವನ್ನು ಗೋವಾ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಅರೆ ಅಲೆಮಾರಿ ಎಂದು ಪರಿಗಣಿಸಲಾಗಿದೆಯೇ ಹೊರತು ಯಾವುದೇ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಲ್ಲ.
ಇತರೆ ಬುಡಕಟ್ಟು ಸಮುದಾಯಗಳ ರೀತಿಯಲ್ಲಿ ಕುಣಬಿ ಮತ್ತು ಕುಡುಬಿಯರು ಹೇಳಿಕೊಳ್ಳುವ ರೀತಿಯಲ್ಲಿ ಮುಂದುವರೆದಿಲ್ಲ. ಇದ್ದರೂ ಕೇವಲ ಬೆರಳೆಣಿಯಷ್ಟು ಜನ ಮಾತ್ರ ನಾಲ್ಕಕ್ಷರ ಕಲಿತಿದ್ದಾರೆ.
ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ಕುಮರಿ ಬೇಸಾಯವನ್ನು ಸಕ್ರಮ ಮಾಡಬೇಕೆಂದು ಹಲವು ದಶಕಗಳಿಂದ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ, ಧ್ವನಿ ಇಲ್ಲದವರ ಇವರ ಕೂಗು ಆಡಳಿತ ನಡೆಸುವವರ ಕಿವಿಗೆ ಕೇಳುತ್ತಿಲ್ಲ.
ಕುಣಬಿ ಸಮುದಾಯ ನಾಗರಿಕ ಸಮಾಜದಲ್ಲೇ ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ದುರ್ಗತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಸರ್ಕಾರ ಅರೆ ಅಲೆಮಾರಿ ಎಂದು ಪರಿಗಣಿಸಿದೆಯಾದರೂ ಯಾವುದೇ ಮೀಸಲಾತಿ ಸೌಲಭ್ಯವನ್ನು ನೀಡಿಲ್ಲ. ಹೀಗಾಗಿ ಇವರನ್ನು ಕನಿಷ್ಟ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ತಲೆತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯ ಮಾಲೀಕತ್ವವನ್ನು ಕೊಡಬೇಕಾದ ಅಗತ್ಯತೆ ಇದೆ -ಡಾ. ಹಿ.ಚಿ. ಬೋರಲಿಂಗಯ್ಯ, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ.

ಕಮ್ಮಾರರ ಬದುಕು ಉರಿವ ಅಗ್ನಿ ಜತೆಗಿನ  ಸರಸ

ಅಲ್ಲೊಂದು ಬೃಹದಾಕಾರವಾದ ವಡೆ. ಆ ವಡೆಯೇ ಮಧುಮಗನಿಗೆ ಅತ್ತೆ!
ಇಂತಹ ವೈಚಿತ್ರ್ಯ ಎಲ್ಲಾದರೂ ಕೇಳಿದ್ದೇವೆಯೇ?
ಇಲ್ಲ. ಆದರೂ ಇದು ಇಂದಿಗೂ ಚಾಲ್ತಿಯಲ್ಲಿರುವ ಸಂಪ್ರದಾಯ.
ರಾಜ್ಯದ ಪಶ್ಚಿಮಘಟ್ಟದಲ್ಲಿ ವಾಸಿಸುತ್ತಿರುವ ಹಲವಾರು ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಕುಣಬಿ ಸಮುದಾಯದಲ್ಲಿ ಇಂತಹ ಪದ್ಧತಿ ಜಾರಿಯಲ್ಲಿದೆ.
ಇವರ ಮದುವೆ ಸಂಪ್ರದಾಯ ನಾಗರಿಕ ಸಮಾಜವನ್ನು ಒಂದು ಕಾಣದ ಲೋಕಕ್ಕೆ ಕೊಂಡೊಯ್ಯುತ್ತದೆ.
ಎಲ್ಲಾ ಸಮುದಾಯದಂತೆ ಈ ಸಮುದಾಯದಲ್ಲಿ ಹೆಣ್ಣನ್ನು ನೋಡಲು ವರನ ಮನೆಯವರು ಮೊದಲು ಹೋಗುವುದಿಲ್ಲ. ಬದಲಿಗೆ ಊರ ಪ್ರಮುಖರೊಬ್ಬರು ವರನ ಕುಟುಂಬದ ರಾಯಭಾರಿಯಾಗಿ ವಧುವಿನ ಮನೆಗೆ ಹೋಗಿ ಹೆಣ್ಣನ್ನು ನೋಡುತ್ತಾರೆ. ಹೆಣ್ಣು ಮತ್ತು ಗಂಡಿನ ಬೆಡಗು ಒಂದೇ ಆಗಿದ್ದರೆ ಪರಸ್ಪರ ಮದುವೆಯಾಗುವಂತಿಲ್ಲ.
ಈ ರಾಯಭಾರಿ ಹೆಣ್ಣನ್ನು ನೋಡಿ ಆಕೆ ಒಪ್ಪಿಗೆಯಾದಲ್ಲಿ ಮಾತ್ರ ಹುಡುಗನ ಕುಟುಂಬಕ್ಕೆ ಸೇರಿದ ಐವರು ಮುತ್ತೈದೆಯರನ್ನು ಹುಡುಗಿಯ ಮನೆಗೆ ಕರೆದುಕೊಂಡು ಹೋಗುತ್ತಾನೆ. ಈ ಮುತ್ತೈದೆಯರು ಹೆಣ್ಣಿಗೆ ಎಣ್ಣೆ ಅರಿಶಿನ ಹಚ್ಚಿ ನಂತರ ಎಲೆ ಅಡಿಕೆ ಕೊಟ್ಟು ಪರಸ್ಪರ ಒಪ್ಪಿಗೆ ಸೂಚಿಸುತ್ತಾರೆ.
ಈ ಒಪ್ಪಿಗೆ ಆದ ಮರುದಿನವೇ ಮದುವೆ!
ಅಷ್ಟರ ವೇಳೆಗಾಗಲೇ ತಮ್ಮ ಬಂಧುಬಳಗದವರಿಗೆ ಆಹ್ವಾನ ನೀಡಲಾಗುತ್ತದೆ. ಮದುವೆ ನಡೆಯುವುದು ಹುಡುಗಿಯ ಮನೆಯಲ್ಲಲ್ಲ. ಬದಲಿಗೆ ಗಂಡಿನ ಮನೆಯ ವಿಶಾಲವಾದ ಆವರಣದಲ್ಲಿ. ಮದುವೆಯ ದಿನ ಹೆಣ್ಣು ಮತ್ತು ಗಂಡಿನ ಸೋದರ ಮಾವಂದಿರು ಎತ್ತಿಕೊಂಡು ಬಂದು ಹಸೆಮಣೆಯ ಮೇಲೆ ನಿಲ್ಲಿಸುತ್ತಾರೆ.
ಬಕುಳದ ಹೂವಿನಿಂದ ಸಿದ್ಧಪಡಿಸಿದ ಹಾರಗಳನ್ನು ಗಂಡು ಹೆಣ್ಣು ಪರಸ್ಪರ ಬದಲಾಯಿಸಿಕೊಳ್ಳುತ್ತಾರೆ. ಇದಕ್ಕೆ ಪೌರೋಹಿತ್ಯ ವಹಿಸುವುದು 'ಮಾತ್ಯಾವಳಿ ಜಾಣ' ಎಂಬ ಸಮುದಾಯದ ಹಿರಿಯ ಪೂಜಾರಿ.
ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ವಿವಾಹ ಬಂಧನವಾಗುತ್ತದೆ.
ಆದರೆ, ವಿಶಿಷ್ಟವೆಂದರೆ ಈ ಶುಭಸಮಾರಂಭದ ವೇಳೆ ವರ ತನ್ನ ಅತ್ತೆಯನ್ನು ನೋಡುವುದು ನಿಷಿದ್ಧ. ದೊಡ್ಡದಾದ ವಡೆಯೊಂದನ್ನು ತಯಾರು ಮಾಡುತ್ತಾರೆ. ಎಲ್ಲಾ ಶಾಸ್ತ್ರಗಳು ಮುಗಿಯುವವರೆಗೆ ವರನ ಪಾಲಿಗೆ ಈ ವಡೆಯೇ ಅತ್ತೆ. ಶಾಸ್ತ್ರಗಳ ನಂತರ ವಡೆಯೊಂದಿಗೆ ಅನ್ನ ಬಡಿಸುವ ಮಹಿಳೆಯೇ ಅತ್ತೆ. ಆಗಲೇ ವರ ಆಕೆಯ ಮುಖ ನೋಡುವುದು.
ಬುಡಕಟ್ಟು ಸಮುದಾಯಗಳಲ್ಲಿ ಅತ್ಯಂತ ಬಡತನದಲ್ಲಿರುವ ಸಮುದಾಯವೆಂದರೆ ಈ ಕುಣಬಿಯರು. ರಾಜ್ಯದಲ್ಲಿ ಸುಮಾರು 25 ಸಾವಿರದಷ್ಟು ಈ ಸಮುದಾಯದ ಜನಸಂಖ್ಯೆ ಇದೆ. ಬಹುತೇಕ ಕುಣಬಿಯರು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಯಲ್ಲಾಪುರ, ಅಂಕೋಲ, ಕಾರವಾರ, ಹೊನ್ನಾವರ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕುಗಳ ಪಶ್ಚಿಮಘಟದ ವನಸಿರಿಯ ಸೆರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ. ಆದರೆ, ಇವರಿಗೆ ಕುಡುಬಿಯರು ಎಂದು ಕರೆಯಲಾಗುತ್ತದೆ. ಆದರೆ, ಕುಣುಬಿಯರು ಮತ್ತು ಕುಡುಬಿಯರು ಸಮುದಾಯದ ಬಹುತೇಕ ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಸಾಮ್ಯತೆ ಕಾಣಬಹುದು.
ದಕ್ಷಿಣ ಕನ್ನಡದ ಕರಾವಳಿ ತೀರದಲ್ಲಿನ ಕುಂದಾಪುರ, ಮಂಗಳೂರು, ಉಡುಪಿ ಬಾರ್ಕೂರು, ಮಂದರ್ತಿ, ಕೊಕ್ಕರ್ಣೆ, ಸುರಾಲು, ಬಿಲ್ಲಾಡಿ, ಹೆಸ್ಕುಂದ, ಹಾಲಾಡಿ, ಬಜಪೆ, ಕೊಲ್ಲೂರು ಸೇರಿದಂತೆ ಮತ್ತಿತರರೆ ಪ್ರದೇಶಗಳಲ್ಲಿ ಕುಡುಬಿಗಳು ವಾಸಿಸುತ್ತಿದ್ದಾರೆ.
ಕುಣಬಿ ಮತ್ತು ಕುಡುಬಿಯರ ಭಾಷೆ ಪ್ರಾದೇಶಿಕತೆಗೆ ತಕ್ಕಂತೆ ಇದೆ. ಕರಾವಳಿಯಲ್ಲಿ ತುಳು, ಗೋವಾಕ್ಕೆ ಸನಿಹದಲ್ಲಿರುವ ಉತ್ತರ ಕನ್ನಡದ ಕುಣಬಿಯರು ಕೊಂಕಣಿ ಮತ್ತು ಕುಂದಾಪುರ ಸೇರಿದಂತೆ ಮತ್ತೆ ಕೆಲವು ಭಾಗದಲ್ಲಿ ಕನ್ನಡ ಮಾತನಾಡುತ್ತಾರೆ.
1795 ರಲ್ಲಿ ಫ್ರಾನ್ಸಿಸ್ ಬುಕಾನನ್ ಎಂಬ ಸಂಶೋಧಕ ಪಶ್ಚಿಮಘಟ್ಟದಲ್ಲಿ ಸುತ್ತಾಡಿ ಕುಣಬಿಯರ ಬಗ್ಗೆ ಸಂಶೋಧನೆ ನಡೆಸಿದ್ದ. ಅವನ ಪ್ರಕಾರ ಕುಣಬಿಯರು ಕರ್ನಾಟಕ ಮೂಲದವರೇ ಎಂದು ಪ್ರತಿಪಾದಿಸಿದ್ದ. ಪೋರ್ಚುಗೀಸರ ಕಾಲದಲ್ಲಿ ಪ್ಲೇಗ್ ಸಂಭವಿಸಿದ್ದರಿಂದ ಮತ್ತು ಬಲವಂತದ ಮತಾಂತರಕ್ಕೆ ಹೆದರಿ ಕುಣಬಿಯರು ಗೋವಾ ರಾಜ್ಯಕ್ಕೆ ಗುಳೇ ಹೋಗಿದ್ದರು. ನಂತರದ ಅವಧಿಯಲ್ಲಿ ಮತ್ತೆ ಕರ್ನಾಟಕಕ್ಕೆ ಬಂದರು ಎಂಬ ವಾದಗಳೂ ಇವೆ. ಆದರೆ, ಈ ಮೂಲದ ಇನ್ನೂ ತರ್ಕಗಳು ಮುಂದುವರೆದಿವೆ.
ಇವರನ್ನು ಅಲೆಮಾರಿ ಬುಡಕಟ್ಟಿಗೆ ಸೇರಿದವರೆಂದು ಹೇಳಲಾಗುತ್ತಿದೆ. ಕಾಡಿನಲ್ಲಿ ಆಹಾರ ಪದಾರ್ಥಗಳ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕಾಲ ಕ್ರಮೇಣ ಕಾಡಿನಲ್ಲೇ ಅಲ್ಪಸ್ವಲ್ಪ ಭೂಮಿಯನ್ನು ಉಳುಮೆ ಮಾಡುವುದನ್ನು ಕರಗತ ಮಾಡಿಕೊಂಡ ಸಮುದಾಯ 'ಕುಮರಿ ಬೇಸಾಯ' ಅಂದರೆ, ಸ್ಥಳಾಂತರ ಕೃಷಿ. ಖಾಲಿ ಬಿದ್ದ ಅರಣ್ಯ ಪ್ರದೇಶದ ಇಳಿಜಾರು ಪ್ರದೇಶವನ್ನು ಹಸನುಗೊಳಿಸಿ ಅಲ್ಲಿ ಬಿತ್ತನೆ ಮಾಡಿ ಚಿಲ್ಲರೆ ಆದಾಯ ಗಳಿಸುತ್ತಿದ್ದರು. ಆದರೆ, ಈ ಭೂಮಿಯ ಒಡೆಯರು ಮಾತ್ರ ಇವರಲ್ಲ. ಈ ಕೃಷಿಯನ್ನು ಅವಲಂಬಿಸಿದ ನಂತರ ಇವರು ಸ್ಥಳದಿಂದ ಸ್ಥಳಕ್ಕೆ ತಮ್ಮ ವಾಸ್ತವ್ಯವನ್ನು ಬದಲಾಯಿಸುವುದನ್ನು ಬಿಟ್ಟರು. ಹೀಗಾಗಿ ಇವರನ್ನು ಅರೆ ಅಲೆಮಾರಿಗಳು ಎನ್ನಲಾಗುತ್ತಿದೆ.
ಈ ಕುಮರಿ ಬೇಸಾಯದಿಂದ ಅಲ್ಪಸ್ವಲ್ಪ ಆದಾಯ ಗಳಿಸುತ್ತಿದ್ದ ಕುಣಬಿಯರು ದಿನ ಕಳೆದಂತೆ ಅರಣ್ಯ ಕಾನೂನುಗಳು ಕಠಿಣವಾಗುತ್ತಿದ್ದಂತೆ ಅನಿವಾರ್ಯವಾಗಿ ವೃತ್ತಿಯನ್ನು ಕೈಬಿಡಬೇಕಾಯಿತು. ಪರಿಣಾಮ ಬಹುತೇಕ ಎಲ್ಲಾ ಕುಟುಂಬಗಳು ಭೂ ಮಾಲೀಕರ ತೋಟ, ಗದ್ದೆಗಳಲ್ಲಿ ಕೂಲಿ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿವೆ. ಹೀಗಾಗಿ ತೀರಾ ಕಡುಬಡತನದ ಸೆರಗಿನಲ್ಲೇ ವಾಸಿಸುತ್ತಿರುವ ಇವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಈಗೇನೂ ಬದಲಾವಣೆಯಾಗಿಲ್ಲ. ಭೂಮಾಲೀಕರ ಶೋಷಣೆ ತಪ್ಪಿಲ್ಲ.
ಪ್ರಸ್ತುತ ಸನ್ನಿವೇಶದಲ್ಲಿ ಆಶ್ರಯ ನೀಡಿದ್ದ ಅರಣ್ಯ ಭೂಮಿ ಇವರ ಕೈತಪ್ಪಿ ಹೋಗಿದೆ. ಆಹಾರ ಸಂಗ್ರಹಣೆ ಮಾಡುವಂತಿಲ್ಲ. ಬೇಟೆಯಂತೂ ನಿಷಿದ್ಧ. ಈ ಎಲ್ಲಾ ಕಾರಣಗಳಿಂದಾಗಿ ಕಡುಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಈ ಸಮುದಾಯ ಮತ್ತಷ್ಟು ಕೆಳಸ್ತರಕ್ಕೆ ತಳ್ಳಲ್ಪಟ್ಟಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಬುಡಕಟ್ಟು ಸಮುದಾಯವನ್ನು ಗೋವಾ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಅರೆ ಅಲೆಮಾರಿ ಎಂದು ಪರಿಗಣಿಸಲಾಗಿದೆಯೇ ಹೊರತು ಯಾವುದೇ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಲ್ಲ.
ಇತರೆ ಬುಡಕಟ್ಟು ಸಮುದಾಯಗಳ ರೀತಿಯಲ್ಲಿ ಕುಣಬಿ ಮತ್ತು ಕುಡುಬಿಯರು ಹೇಳಿಕೊಳ್ಳುವ ರೀತಿಯಲ್ಲಿ ಮುಂದುವರೆದಿಲ್ಲ. ಇದ್ದರೂ ಕೇವಲ ಬೆರಳೆಣಿಯಷ್ಟು ಜನ ಮಾತ್ರ ನಾಲ್ಕಕ್ಷರ ಕಲಿತಿದ್ದಾರೆ.
ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ಕುಮರಿ ಬೇಸಾಯವನ್ನು ಸಕ್ರಮ ಮಾಡಬೇಕೆಂದು ಹಲವು ದಶಕಗಳಿಂದ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ, ಧ್ವನಿ ಇಲ್ಲದವರ ಇವರ ಕೂಗು ಆಡಳಿತ ನಡೆಸುವವರ ಕಿವಿಗೆ ಕೇಳುತ್ತಿಲ್ಲ.
ಕುಣಬಿ ಸಮುದಾಯ ನಾಗರಿಕ ಸಮಾಜದಲ್ಲೇ ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ದುರ್ಗತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಸರ್ಕಾರ ಅರೆ ಅಲೆಮಾರಿ ಎಂದು ಪರಿಗಣಿಸಿದೆಯಾದರೂ ಯಾವುದೇ ಮೀಸಲಾತಿ ಸೌಲಭ್ಯವನ್ನು ನೀಡಿಲ್ಲ. ಹೀಗಾಗಿ ಇವರನ್ನು ಕನಿಷ್ಟ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು.
ತಲೆತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯ ಮಾಲೀಕತ್ವವನ್ನು ಕೊಡಬೇಕಾದ ಅಗತ್ಯತೆ ಇದೆ -ಡಾ. ಹಿ.ಚಿ. ಬೋರಲಿಂಗಯ್ಯ, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ.